ಆನೇಕಲ್ : ತಾಲ್ಲೂಕಿನ ಹುಲಿಮಂಗಲದಲ್ಲಿ ರಾಜೀವ್ ಗಾಂಧಿ ಅವರ ಸಾಧನೆಯನ್ನು ಸ್ಮರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸದ್ಭಾವನಾ ಯಾತ್ರೆಯ ಮೂಲಕ ಕನ್ಯಾಕುಮಾರಿಯಿಂದ ದೆಹಲಿಯವರೆಗೆ ಜ್ಯೋತಿ ಯಾತ್ರೆಯನ್ನು ಕೈಗೊಂಡಿದೆ ಎಂದು ಯುವ ಕಾಂಗ್ರೆಸ್ ರಾಜ್ಯ ಘಟಕದ ಪ್ರಧಾನ ಕರ್ಯರ್ಶಿ ದೀಪಿಕಾರೆಡ್ಡಿ ಬುಧವಾರ ತಿಳಿಸಿದರು.
ಸಮಾಜದ ಪ್ರತಿಯೊಬ್ಬರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜದ ನಿರ್ಮಾಣಕ್ಕೆ ಕೊಡುಗೆ ನೀಡಬೇಕು. ಕಾಂಗ್ರೆಸ್ ಪಕ್ಷ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸಹಾಯ ಹಸ್ತ, ಆರೋಗ್ಯ ಹಸ್ತ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳ ಮೂಲಕ ನೊಂದವರಿಗೆ ಧೈರ್ಯ ತುಂಬುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡ ಹೆಚ್.ಪಿ.ರಾಜಗೋಪಾಲರೆಡ್ಡಿ ಮಾತನಾಡಿ ರಾಜೀವ್ ಗಾಂಧಿ ಅವರ ಹುಟ್ಟುಹಬ್ಬದ ಪ್ರಯುಕ್ತ 96 ಮಂದಿ ವಿಕಲಚೇತನರಿಗೆ ವೀಲ್ಚೇರ್, ಟ್ರೈಸಿಕಲ್ ಮತ್ತು ಅಗತ್ಯವಿರುವ ಸೌಲಭ್ಯಗಳನ್ನು ನೀಡಲಾಗಿದೆ.
ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸುನಾ, ಜಿಗಣಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮುನಿರತ್ನ, ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಜಯಶ್ರೀಗೌಡ ಹಾಜರಿದ್ದರು.