ಸಂಪುಟ ವಿಸ್ತರಣೆ ಚರ್ಚೆ ಮುನ್ನೆಲೆಗೆ

ಸಂಪುಟ ವಿಸ್ತರಣೆ ಚರ್ಚೆ ಮುನ್ನೆಲೆಗೆ

ಬೆಂಗಳೂರು : ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ನಾಲ್ಕೂ ಅಭ್ಯರ್ಥಿಗಳು ಅವಿರೋಧ ಆಯ್ಕೆ ಆಗುವುದರಿಂದ ಸಚಿವ ಸಂಪುಟ ವಿಸ್ತರಣೆ ಚರ್ಚೆ ಮುನ್ನೆಲೆಗೆ ಬಂದಿದೆ. ಎಂ.ಟಿ.ಬಿ.ನಾಗರಾಜ್ ಮತ್ತು ಆರ್.ಶಂಕರ್ ಅವರಿಗೆ ಈ ಹಿಂದೆ ನೀಡಿದ ಭರವಸೆಯಂತೆ ಸಚಿವ ಸ್ಥಾನ ನೀಡುವುದು ಬಹುತೇಕ ಖಚಿತ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಕುರುಬ ಸಮುದಾಯಕ್ಕೆ ಸೇರಿದ ಕೆ.ಎಸ್.ಈಶ್ವರಪ್ಪ ಮತ್ತು ಬೈರತಿ ಬಸವರಾಜ್ ಅವರು ಈಗಾಗಲೇ ಸಚಿವರಾಗಿದ್ದಾರೆ. ನಾಗರಾಜ್ ಮತ್ತು ಶಂಕರ್ ಅವರಿಗೆ ಸಚಿವ ಸ್ಥಾನ ನೀಡಿದರೆ ಲಿಂಗಾಯತ, ಒಕ್ಕಲಿಗ ಸಮುದಾಯವನ್ನು ಬಿಟ್ಟರೆ ಮತ್ತೊಂದು ಸಮುದಾಯಕ್ಕೆ ಅಧಿಕ ಸಚಿವ ಸ್ಥಾನಗಳನ್ನು ನೀಡಿದಂತಾಗುತ್ತದೆ ಎಂಬ ಚರ್ಚೆಯೂ ಶುರುವಾಗಿದೆ.

ಉಮೇಶ ಕತ್ತಿಗೆ ನೀಡಿದರೆ ಮೂರು ಭರ್ತಿ ಆಗುತ್ತದೆ. ಚುನಾವಣೆ ಫಲಿತಾಂಶ ಪ್ರಶ್ನಿಸಿದ ಪ್ರಕರಣ ಕೋರ್ಟ್ನಲ್ಲಿ ಇರುವುದರಿಂದ ರಾಜರಾಜೇಶ್ವರಿ ನಗರ ಹಾಗೂ ಮಸ್ಕಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿಲ್ಲ. ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಅನರ್ಹಗೊಂಡಿರುವ ಈ ಕ್ಷೇತ್ರಗಳ ಮುನಿರತ್ನ

ಹಾಗೂ ಪ್ರತಾಪಗೌಡ ಪಾಟೀಲ ಅವರಿಗಾಗಿ ಎರಡು ಸ್ಥಾನಗಳನ್ನು ಖಾಲಿ ಉಳಿಸಲಾಗುತ್ತದೆಯೋ ಅಥವಾ ಈ ಹೊತ್ತಿನಲ್ಲಿ ಸಂಘ ಪರಿವಾರ ಹಿನ್ನೆಲೆಯ ಶಾಸಕರಿಗೆ ನೀಡಲಾಗುತ್ತದೆಯೋ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಸರ್ಕಾರ ಬಂದು ವರ್ಷದ ಬಳಿಕ ಸಚಿವರ ಕಾರ್ಯವೈಖರಿ ಆಧರಿಸಿ ಕೆಲವರನ್ನು ಕೈಬಿಟ್ಟು, ಹೊಸಬರಿಗೆ ಅವಕಾಶ ಕೊಡುವ ಚಿಂತನೆ ಪಕ್ಷದಲ್ಲಿತ್ತು.ಅದಕ್ಕೂ ಚಾಲನೆ ಸಿಗಬಹುದು ಎಂಬ ಚರ್ಚೆಯೂ ನಡೆದಿದೆ.

Related