ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಆಹಾರ ಪೂರೈಸಿದ-ಸತೀಶ್ ನೀನಾಸಂ

  • In Cinema
  • July 6, 2022
  • 228 Views
ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಆಹಾರ ಪೂರೈಸಿದ-ಸತೀಶ್ ನೀನಾಸಂ

ಕನ್ನಡದ ಹೆಸರಾಂತ ನಟ ಸತೀಶ್ ನೀನಾಸಂ ನಿನ್ನೆ ಬೆಂಗಳೂರಿನ ಅನಾಥಾಶ್ರಮಗಳಿಗೆ ಭೇಟಿ ನೀಡಿದ್ದಾರೆ. ಪೆಟ್ರೊಮ್ಯಾಕ್ಸ್ ತಂಡದೊಂದಿಗೆ ಭೇಟಿ ನೀಡಿದ ಅವರು, ಅಲ್ಲಿ ವಾಸವಿದ್ದವರ ಜೊತೆ ಊಟ ಮಾಡಿ, ಅವರಿಗೂ ಊಟ ಕೊಡಿಸಿ ಕೆಲ ಹೊತ್ತು ಕಳೆದಿದ್ದಾರೆ. ಸತೀಶ್ ಅವರು ಅನಾಥಾಶ್ರಮಕ್ಕೆ ಹೋಗುವುದಕ್ಕೆ ಕಾರಣವಿದೆ. ಸದ್ಯದಲ್ಲೇ ಅವರ ಪೆಟ್ರೋಮ್ಯಾಕ್ಸ್ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಸತೀಶ್, ಫುಡ್ ಡೆಲಿವರಿ ಬಾಯ್ ಆಗಿ ನಟಿಸಿದ್ದಾರೆ. ಈ ಪಾತ್ರ ಪ್ರೇರಣೆಯಿಂದಾಗಿ ಅವರು ಅಲ್ಲಿಗೆ ಹೋಗಿದ್ದಾರಂತೆ.

ಆಗಾಗ್ಗೆ ನಾನು ಅನಾಥಾಶ್ರಮಗಳಿಗೆ ಮತ್ತು ವೃದ್ಧಾಶ್ರಮಗಳಿಗೆ ಹೋಗುತ್ತಲೇ ಇರುತ್ತೇನೆ. ಈ ಬಾರಿಯ ವಿಶೇಷತೆ ಅಂದರೆ, ನಾನು ಪೆಟ್ರೊಮ್ಯಾಕ್ಸ್ ಸಿನಿಮಾದಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ನಟಿಸಿದ್ದೇನೆ. ಹಸಿದ ಹೊಟ್ಟೆಗಳಿಗೆ ಆಹಾರ ಪೂರೈಸುವ ಪಾತ್ರವದು. ಆ ನೆಪವಾಗಿಟ್ಟುಕೊಂಡು ಈ ಬಾರಿ ಹೋಗಿದ್ದೆ. ಪ್ರತಿ ಬಾರಿ ಹೋದಾಗಲೂ ನನಗೆ ಬೇರೆ ಬೇರೆ ರೀತಿಯ ಅನುಭವಗಳು ಆಗುತ್ತವೆ. ಈ ಬಾರಿಯಂತೂ ನಾನು ತುಂಬಾ ಭಾವುಕನಾಗಿಬಿಟ್ಟೆ. ಸಿನಿಮಾದ ಕಥೆ ತುಂಬಾ ಎಮೋಷನಲ್ ಆಗಿದೆ. ಅದನ್ನು ಹಾಸ್ಯ ರೂಪದಲ್ಲಿ ಕಟ್ಟುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು ಎಂದಿದ್ದಾರೆ ಸತೀಶ್.

ನೀರ್ ದೋಸೆ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ವಿಜಯ್ ಪ್ರಸಾದ್ ಈ ಚಿತ್ರದ ನಿರ್ದೇಶಕರು. ಸತೀಶ್ ಜೊತೆ ಹರಿಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ. ಕಾರುಣ್ಯ ರಾಮ್, ನಾಗಭೂಷಣ್, ಅರುಣ್ ಸೇರಿದಂತೆ ಹಲವು ಕಲಾವಿದರು ಇದ್ದಾರೆ. ವಿಜಯ್ ಪ್ರಸಾದ್, ಸುಧೀರ್, ಸತೀಶ್ ನೀನಾಸಂ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

Related