ದೇಶಕ್ಕೆ ಅಭಿವೃದ್ಧಿ ಕೊಟ್ಟ ಪಕ್ಷ ಕಾಂಗ್ರೆಸ್ – ಡಿಕೆಶಿ

ದೇಶಕ್ಕೆ ಅಭಿವೃದ್ಧಿ ಕೊಟ್ಟ ಪಕ್ಷ ಕಾಂಗ್ರೆಸ್ –  ಡಿಕೆಶಿ

ಇಡಿ ಬರಲಿ, ಐಟಿ ಬರಲಿ, ಸಿಬಿಐ ಬರಲಿ, ಬಿಜೆಪಿ ದಂಡೇ ಬರಲಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಮುಟ್ಟಲು ಸಾಧ್ಯವಿಲ್ಲ. ಇದೇ ಕಾಂಗ್ರೆಸ್ ಪಕ್ಷದ ಶಕ್ತಿ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ, ದೇಶಕ್ಕೆ ತ್ರಿವರ್ಣ ಧ್ವಜ ತಂದುಕೊಟ್ಟ, ರಾಷ್ಟ್ರ ಗೀತೆ ತಂದುಕೊಟ್ಟ, ದೇಶಕ್ಕೆ ಅಭಿವೃದ್ಧಿ ಕೊಟ್ಟ ಪಕ್ಷ ಕಾಂಗ್ರೆಸ್.

ನಾವೆಲ್ಲರೂ ಕಾಂಗ್ರೆಸ್ ಕುಟುಂಬದ ಮಕ್ಕಳು. ನನಗೆ ಇಡಿ, ತಿಹಾರ್ ಜೈಲು, ಐಟಿ, ಸಿಬಿಐನ ಸ್ವಲ್ಪ ಅನುಭವವಿದೆ. ನಾನು ರಾಹುಲ್ ಗಾಂಧಿ ಅವರಿಗೆ ಒಂದು ಸಣ್ಣ ಸಂದೇಶ ಕಳುಹಿಸಿದ್ದೆ. ಅವರು ನನಗೆ ಕರೆ ಮಾಡಿದರು. ಹೊಸ ರೋಗಿಯು ಹಳೆ ರೋಗಿಯ ಜತೆ ಮಾತನಾಡಬೇಕು ಎಂದು ಹೇಳಿದರು. ಆಗ ನಾವು ಕೆಲವು ವಿಚಾರಗಳನ್ನು ಹಂಚಿಕೊಂಡೆವು. ನಾನು ಹಾಗೂ ಸಿದ್ದರಾಮಯ್ಯನವರು ದೆಹಲಿಗೆ ಹೋದಾಗ ಇಡಿ ವಿಚಾರಣೆ ಹೇಗಿತ್ತು ಎಂದು ಕೇಳಿದೆ. ಅವರು ಯಾವುದೇ ರೀತಿಯಲ್ಲೂ ಮಾನಸಿಕವಾಗಿ ಕುಗ್ಗಿರಲಿಲ್ಲ.

ನಿರಂತರವಾಗಿ ವಿಚಾರಣೆ ನಡೆಸಿದರೂ ನೀವು ಕುಗ್ಗಿಲ್ಲವಲ್ಲ ಯಾಕೆ ಎಂದು ಇಡಿ ಅಧಿಕಾರಿಗಳು ರಾಹುಲ್ ಗಾಂಧಿ ಅವರನ್ನು ಕೇಳಿದರಂತೆ. ಅದಕ್ಕೆ ಅವರು ಇಲ್ಲಿ ಕೇವಲ ರಾಹುಲ್ ಗಾಂಧಿ ಒಬ್ಬ ಕೂತಿಲ್ಲ. ದೇಶದ ಕೋಟ್ಯಂತರ ಕಾಂಗ್ರೆಸಿಗರು ಕೂತಿದ್ದಾರೆ ಎಂದು ಉತ್ತರಿಸಿದರಂತೆ.

ಇಂದು ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರು ಮಾತ್ರ ಅಲ್ಲಿ ಕೂತಿಲ್ಲ, ದೇಶದ ಎಲ್ಲ ಕಾಂಗ್ರೆಸಿಗರೂ ಕೂಡ ಅವರ ಜತೆ ಕೂತಿದ್ದಾರೆ. ನಾವು ನಿಮ್ಮ ಜತೆ ಇದ್ದೇವೆ ಎಂದು ಹೇಳಲು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ನಾಳೆ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ.

ಈ ಹೋರಾಟ ದೇಶಕ್ಕಾಗಿ. ಈ ಹೋರಾಟ ನಮ್ಮ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಬೆಂಬಲ ನೀಡಲು. ನಿಮ್ಮ ಜತೆ ನಾವಿದ್ದೇವೆ ಎಂದು ಧೈರ್ಯ ತುಂಬಲು.

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ನೊಟೀಸ್ ಗೆ ಹೆದರುವವರಲ್ಲ. ಸೋನಿಯಾ ಗಾಂಧಿ ಅವರು ನಾನು ತಿಹಾರ್ ಜೈಲಿನಲ್ಲಿದ್ದಾಗ ಒಂದೂವರೆ ತಾಸು ಕೂತು ನನ್ನ ಜತೆ ಮಾತನಾಡಿ ನನಗೆ ಶಕ್ತಿ ತುಂಬಿದ್ದರು. ಆಗ ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಇರಲಿಲ್ಲ. ಕಾಂಗ್ರೆಸ್ ಕಾರ್ಯಕರ್ತನ ಜತೆಗೆ ನಾನಿದ್ದೇನೆ ಎಂದು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಧೈರ್ಯ ತುಂಬಿದ್ದರು. ಇಂದು ನಾವು ಅವರಿಗೆ ಧೈರ್ಯ ತುಂಬಬೇಕು  ಎಂದು ತಿಳಿಸಿದರು.

Related