ಬೆಂಗಳೂರು: ರಾಜ ಬಿಜೆಪಿಯಲ್ಲಿ ದಿನಕ್ಕೊಂದು ಹೊಸ ಬದಲಾವಣೆ ನಡೆಯುತ್ತಿದ್ದು, ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯಲು ಮುಂದಾಗಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ಮ ಯತ್ನಾಳ್ ತಮ್ಮ ಹೇಳಿಕೆಗಳ ಮೂಲಕ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ತಮ್ಮದೇ ಮಾರ್ಗದಲ್ಲಿ ಹೊರಟಿರೋ ಯತ್ನಾಳ್ ಸಿಟ್ಟಿಗೆ ಮದ್ದರೆಯಲು ರಣತಂತ್ರ ರಚನೆ ಆಗಿದೆ ಎನ್ನಲಾಗಿದೆ.
ವಿಪಕ್ಷ ನಾಯಕ ಮತ್ತು ರಾಜಾಧ್ಯಕ್ಷರ ಆಯ್ಕೆಯಲ್ಲಿ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡಿಲ್ಲ ಎಂಬುವುದು ಬಸನಗೌಡ ಪಾಟೀಲ್ ಯತ್ನಾಳ್ ಅವರ ವಾದವಾಗಿದೆ.
ಇದೀಗ ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಅಶೋಕ್ ಮತ್ತು ವಿಜಯೇಂದ್ರ ಮುಂದಾದಂತೆ ಕಾಣಿಸುತ್ತಿದೆ. ಯತ್ನಾಳ್ ಮುನಿಸಿಗೆ ಪಂಚಮಸಾಲಿ ಪ್ರತಿ ಅಸ್ತ್ರದ ತಿರುಗೇಟು ನೀಡಲು ಇಬ್ಬರೂ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಶಾಸಕ ಅರವಿಂದ್ ಬೆಲ್ಲದ್ ಸಹ ಯತ್ನಾಳ್ ರೀತಿಯಲ್ಲೇ ಉತ್ತರ ಕರ್ನಾಟಕಕ್ಕೆ ಆದ್ಯತೆ ಬಗ್ಗೆ ಅಸಮಧಾನ ಹೊರಹಾಕಿದ್ದರು. ಇದೀಗ ಯತ್ನಾಳ್ ತಿರುಗೇಟು ಕೊಡಲು ಬೆಲ್ಲದ್ ಅಸ್ತ್ರ ಪ್ರಯೋಗಿಸಲು ಆರ್,ಅಶೋಕ್, ವಿಜಯೇಂದ್ರ ಮುಂದಾಗಿದ್ದಾರಂತೆ.
ವಿಧಾನಸಭೆ ಉಪನಾಯಕನ ಸ್ಥಾನವನ್ನು ಅರವಿಂದ್ ಬೆಲ್ಲದ್ ಅವರಿಗೆ ನೀಡಿದ್ರೆ ಯತ್ನಾಳ್ ಆರೋಪಕ್ಕೆ ತಿರುಗೇಟು ನೀಡಿದಂತಾಗುತ್ತದೆ.