ಮಂಡ್ಯ : ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧಿಕಾರ ಹಿಡಿಯಲು ಜೆಡಿಎಸ್- ಬಿಜೆಪಿ ಸಖ್ಯ ಬಹುತೇಕ ಖಚಿತವಾಗಿದ್ದು ಇಂದು ಮಧ್ಯಾಹ್ನ ನಡೆಯುವ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಕುತೂಹಲ ಮೂಡಿಸಿದೆ.
ಸ್ಪಷ್ಟ ಬಹುಮತ ಇದ್ದರೂ ಕಾಂಗ್ರೆಸ್ ಗೆ ಅಧಿಕಾರ ದೂರವಾಗಿದೆ. ಕಾಂಗ್ರೆಸ್ ಬೆಂಬಲದಿಂದ ಗೆದ್ದಿದ್ದ ಅಮರಾವತಿ ಅಶ್ವತ್ಥ್ ಜೆಡಿಎಸ್ ಸೇರಿರುವುದೇ ಇದಕ್ಕೆ ಕಾರಣವಾಗಿದೆ.
ಆಡಳಿತ ಮಂಡಳಿ 15 ನಿರ್ದೇಶಕ ಸ್ಥಾನ ಹೊಂದಿದ್ದು 12 ಸ್ಥಾನಗಳಿಗೆ ಚುನಾವಣೆ ನಡೆದಿದೆ. 8 ಮಂದಿ ಕಾಂಗ್ರೆಸ್ ಬೆಂಬಲಿತರು, ನಾಲ್ವರು ಜೆಡಿಎಸ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ.
ಅಧಿಕಾರ ಹಿಡಿಯಲು 8 ಸ್ಥಾನಗಳ ಅವಶ್ಯಕತೆ ಇದೆ. ಜೆಡಿಎಸ್ ನಾಲ್ವರು, ಕಾಂಗ್ರೆನಿಂದ ಬಂದಿರುವ ಅಶ್ವತ್ಥ್, ಅಧಿಕಾರಿಗಳು, ನಾಮನಿರ್ದೇಶಿತರ ಬೆಂಬಲದೊಂದಿಗೆ ಅಧಿಕಾರ ಪಡೆಯಲು ಜೆಡಿಎಸ್- ಬಿಜೆಪಿ ಸಜ್ಜಾಗಿವೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ- ಜೆಡಿಎಸ್ ಮುಖಂಡ ಎಚ್.ಡಿ ಕುಮಾರಸ್ವಾಮಿ ಚರ್ಚೆ ನಡೆಸಿದ್ದು ಮೈತ್ರಿಗೆ ಇಬ್ಬರೂ ನಾಯಕರು ಸಮ್ಮತಿಸಿದ್ದಾರೆ ಎಂದು ಮುಖಂಡರು ಹೇಳುತ್ತಿದ್ದಾರೆ.