ಬೆಂಗಳೂರು: ಇಂದು ನಾಡಿನಾದ್ಯಂತ ಕರುನಾಡಿನ ಹಬ್ಬ, ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ.
ಇನ್ನು 68ನೇ ರಾಜ್ಯೋತ್ಸವ ದಿನವಾಗಿರುವ ಇಂದು ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಯೊಬ್ಬ ಕನ್ನಡಿಗ ರಾಜ್ಯದೊಳಗಡೆ ಕನ್ನಡದಲ್ಲೇ ವ್ಯವಹರಿಸುವಂತೆ ಆಗ್ರಹಪೂರ್ವಕ ಮನವಿ ಮಾಡಿದರು.
ಕಂಠೀರವ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನಡೆಸಿ ಮಾತಾಡಿದ ಮುಖ್ಯಮಂತ್ರಿಯವರು, ಪ್ರತಿಯೊಬ್ಬ ಕನ್ನಡಿಗ ಕನ್ನಡ ಭಾಷೆಯಲ್ಲೇ ವ್ಯವಹರಿಸುವ, ಕನ್ನಡ ಭಾಷೆ, ನೆಲ, ಜಲ ಮತ್ತು ಸಂಸ್ಕೃತಿಯನ್ನು ಎತ್ತಿಹಿಡಿಯುವ ಪ್ರತಿಜ್ಞೆ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.
ರಾಜ್ಯದ ಎಲ್ಲ ಕನ್ನಡಿಗರು ಕನ್ನಡ ನಾಡು ತಮ್ಮ ತಾಯ್ನಾಡು, ಕನ್ನಡ ಭಾಷೆ ತಮ್ಮ ಮಾತೃಭಾಷೆ, ಜಲ ತಮ್ಮದು ನೆಲ ತಮ್ಮದು ಅಂತ ಅಭಿಮಾನ ತಳೆಯಬೇಕಿದೆ. ಈ ನಾಡಿನ ಜನ ಕನ್ನಡಕ್ಕೆ ಹೊರತಾದ ಬೇರೆ ಭಾಷೆಗಳಲ್ಲಿ ವ್ಯವಹರಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.