ಹೊಸಕೋಟೆ : ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ತನ್ನದೇ ಆದ ಪ್ರತಿಭೆ ಅಡಗಿದ್ದು, ಪೂರಕವಾದ ಪರಿಕರಗಳ ಅಗತ್ಯತೆ ಇದೆ ಎಂದು ದೊಡ್ಡಹರಳಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಶಿಕ್ಷಣ ಫೌಂಡೇಷನ್ ವತಿಯಿಂದ ನೀಡಲಾದ ಗಣಿತ ಅಭ್ಯಾಸ ಪುಸ್ತಕ ಹಾಗೂ ಇಂಗ್ಲೀಷ್ ಬರಹ ಪುಸ್ತಕಗಳನ್ನು ವಿದ್ಯಾರ್ಥಿಗಳ ಪೋಷಕರಿಗೆ ವಿತರಣೆ ಮಾಡಿ ಮಾತನಾಡಿದರು. 4 ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ ಅಭ್ಯಾಸ ಪುಸ್ತಕ ಹಾಗೂ ಆಂಗ್ಲಭಾಷಾ ಬರಹ ಅಭ್ಯಾಸ ಪುಸ್ತಕವನ್ನು ನೀಡಲಾಗಿದ್ದು ಪೋಷಕರು ಮನೆಯಲ್ಲಿಯೇ ಮಕ್ಕಳಿಗೆ ಕಲಿಕೆ ಮಾಡಿಸಬೇಕು ಎಂದರು.
ಶಿಕ್ಷಣ ಫೌಂಡೇಷನ್ ಸಂಯೋಜಕಿ ಮನುಜ ಮಾತನಾಡಿ ಶಾಲೆಯಲ್ಲಿ 4 ರಿಂದ 7ನೇ ತರಗತಿಯವರೆಗೆ ಸುಮಾರು 25 ವಿದ್ಯಾರ್ಥಿಗಳಿದ್ದು ಅವರ ಕಲಿಕೆ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈ ಪರಿಕರಗಳು ಸಹಕಾರಿಯಾಗಲಿವೆ. ಪ್ರತಿವರ್ಷದಂತೆ ಫೌಂಡೇಷನ್ ಈ ಸಾಲಿನಲ್ಲೂ ಸರ್ಕಾರಿ ಶಾಲೆಗಳಿಗೆ ಪರಿಕರಗಳನ್ನು ನೀಡುತ್ತಿದೆ ಎಂದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ವೆಂಕಟೇಶ್, ಸಹ ಶಿಕ್ಷಕಿ ಕಲಾವತಿಮುನೇಗೌಡ, ಅನಿತಾ, ಪೋಷಕ ವರ್ಗ ಹಾಜರಿದ್ದರು.