ರಾಕಿಂಗ್ ಸ್ಟಾರ್ ಯಶ್ ವಿರುದ್ಧ ದೂರು

ರಾಕಿಂಗ್ ಸ್ಟಾರ್ ಯಶ್ ವಿರುದ್ಧ ದೂರು

ಹಾಸನ : ದುದ್ದ ಹೋಬಳಿ ತಿಮ್ಲಾಪುರ ಗ್ರಾಮದ ಬಳಿ ನಟ ಯಶ್ ಜಮೀನು ಖರೀದಿಸಿದ್ದು, ರಸ್ತೆ ನಿರ್ಮಿಸುವ ವಿಚಾರವಾಗಿ ಯಶ್‌ರ ತಂದೆ-ತಾಯಿ ಹಾಗೂ ಗ್ರಾಮಸ್ಥರ ನಡುವೆ ಗಲಾಟೆ ನಡೆದಿದ್ದು, ಈ ಸಂಬಂಧ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಅಣ್ಣಾಜಪ್ಪ ಜಿಲ್ಲಾಧಿಕಾರಿಗಳಿಗೆ ಶನಿವಾರ ದೂರು ನೀಡಿದ್ದಾರೆ.

ಯಶ್ ತಂದೆ ಅರುಣ್ ಕುಮಾರ್ ಹಾಗೂ ತಾಯಿ ಪುಷ್ಪ ಜಮೀನಿನ ಬಳಿ ಕೆಲಸ ಮಾಡುವಾಗ ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿತ್ತು. ಇದೇ ವಿಚಾರವಾಗಿ ದುದ್ದ ಪೊಲೀಸ್ ಠಾಣೆಯಲ್ಲಿ ಯಶ್ ಕುಟುಂಬ ದೂರು ನೀಡಿತ್ತು. ಸ್ವತಃ ಯಶ್ ಸಹ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಯಶ್ ವಿರುದ್ಧ ರೈತ ಸಂಘದವರು ದೂರು ದಾಖಲಿಸಿದ್ದಾರೆ.

ರೈತರ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆಂದು ಹೇಳುವವರು ತಮ್ಮ ಜಮೀನನ್ನು ಉಳಿಸಿಕೊಳ್ಳುವ ಸಲುವಾಗಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಲು ಹೊರಟಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿರುವ ರೈತ ಸಂಘದವರು, ಚಿತ್ರನಟನಾದರೆ ಏನು ಬೇಕಾದರೂ ಮಾಡಬಹುದು ಎಂಬ ಯೋಚನೆಯನ್ನು ತಲೆಯಿಂದ ತೆಗೆದುಹಾಕಬೇಕು.

ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿ ರೈತರ ಬಗ್ಗೆ ಕೂಗಾಡುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕಾಂಪೌಂಡ್ ನಿರ್ಮಾಣ ಮಾಡಿ ರೈತರು ಸಂಚರಿಸಲು ದಾರಿ ಇಲ್ಲದಂತೆ ಮಾಡಿದ್ದಾರೆ. ದಾರಿ ಬಿಡಿಸಿ ಕೊಡುವಂತೆ ಮನವಿ ಮಾಡಿದ್ದರೂ ಮನವಿಯನ್ನು ಪುರಷ್ಕರಿಸಿಲ್ಲ. ಇದರೊಂದಿಗೆ ಗೂಂಡಾಗಳನ್ನು ಕರೆಸಿ ಗ್ರಾಮಸ್ಥರ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದಾರೆಂದು ಅಣ್ಣಾಜಪ್ಪನವರು ಗಂಭೀರ ಆರೋಪ ಮಾಡಿದ್ದು, ಸೂಕ್ತ ರಕ್ಷಣೆ ನೀಡಲು ಪೊಲೀಸರ ಬಳಿ ಮನವಿ ಮಾಡಿದ್ದಾರೆ.

Related