ಬೆಂಗಳೂರು : ರಾಜ್ಯಾದ್ಯಂತ ಮಾರಕ ಕೊರೋನಾ ವೈರಸ್ ಆರ್ಭಟ ಹೆಚ್ಚಾಗುತ್ತಿದ್ದಂತೆಯೇ ಸಿಎಂ ಬಿ.ಎಸ್ ಯಡಿಯೂರಪ್ಪ ರಾಜ್ಯ ಪ್ರವಾಸ ಕೈಬಿಟ್ಟಿದ್ದಾರೆ. ಸಿಎಂ ಯಡಿಯೂರಪ್ಪ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಬೇಕಿತ್ತು. ಆದರೀಗ, ಕೊರೋನಾ ವೈರಸ್ ಭೀತಿಯಿಂದಾಗಿ ಬೆಂಗಳೂರಿನಿಂದಲೇ ಆನ್ಲೈನ್ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಲು ನಿರ್ಧರಿಸಿದ್ದಾರೆ.
ಸೋಮವಾರ ಬಿ.ಎಸ್ ಯಡಿಯೂರಪ್ಪ ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಕಾಮರಿಗಳಿಗೆ ಚಾಲನೆ ನೀಡುವ ಸಲುವಾಗಿ ಹೋಗಬೇಕಿತ್ತು. ಆದರೀಗ, ಕೊರೋನಾ ವೈರಸ್ ಕಾರಣದಿಂದ ಬೆಂಗಳೂರಿನ ಕಚೇರಿಯಲ್ಲೇ ಕುಳಿತು ಆನ್ಲೈನ್ ಮೂಲಕ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಆನ್ಲೈನ್ ಮೂಲಕ ಭೂಮಿ ಪೂಜೆ ನೆರವೇರಿಸಲಿದ್ಧಾರೆ.
ಬೆಳಿಗ್ಗೆ 11 ಗಂಟೆಯಿಂದಲೇ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಪೂಜೆ ನೆರವೇರಿಸಲಿದ್ದಾರೆ. ಕೊರೋನಾ ಸಮಸ್ಯೆ ಇಲ್ಲದಿದ್ದರೇ ಸ್ಥಳಕ್ಕೆ ಹೋಗಿ ಕಾಮಗಾರಿಗೆ ಚಾಲನೆ ನೀಡಬಹುದಿತ್ತು. ಸದ್ಯ ಕೋವಿಡ್-19 ತೀವ್ರಗೊಂಡ ಕಾರಣ ಹೀಗೆ ಮಾಡಲು ನಿರ್ಧಾರ ತೆಗೆದುಕೊಂಡಿದ್ದಾರೆ.
ಶಿವಮೊಗ್ಗಂದತೆಯೇ ಹಲವು ಜಿಲ್ಲೆಗಳಿಗೆ ಯಡಿಯೂರಪ್ಪ ಪ್ರವಾಸ ಮಾಡಬೇಕಿತ್ತು. ಇದೀಗ ರಾಜ್ಯ ಪ್ರವಾಸ ರದ್ದು ಮಾಡಿರುವ ಯಡಿಯೂರಪ್ಪ ಇಂದಿನಿಂದ ತನ್ನ ಕಚೇರಿಯಲ್ಲೇ ಕೂತು ಬೇರೆ ಜಿಲ್ಲೆಗಳ ವಿವಿಧ ಕಾಮಗಾರಿಗಳಿಗೆ ಆನ್ಲೈನ್ ಮೂಲಕ ಚಾಲನೆ ನೀಡಲಿದ್ಧಾರೆ.