ನಟ ಶರಣ್ ಮತ್ತು ಆಶಿಕಾ ರಂಗನಾಥ್ ಜೋಡಿಯಾಗಿ ಅಭಿನಯಿಸಿರುವ ಸಿನಿಮಾ ಅದ್ಧೂರಿಯಾಗಿ ತೆರೆಕಂಡಿದೆ. ಸಿನಿಮಾ ವೀಕ್ಷಿಸಿದ ಅಭಿಮಾನಿಗಳು ಭಾಗ 2 ನೋಡಲೇ ಬೇಕು ಎಂದಿದ್ದಾರೆ.
ಬಾಲ್ಯಕಾಲದಲ್ಲಿ ಕಳೆದುಹೋದ ಮಗನಿಗಾಗಿ ಕಾಯುತ್ತಿರುವ ತಾಯಿಯ ಕಣ್ಣೀರಿನ ಆಧಾರ, ಮಾಟ-ಮಂತ್ರದ ಕಪ್ಪು ಪ್ರಪಂಚದ ಹಿನ್ನೆಲೆ, ಕಣ್ಣಲ್ಲೇ ಮಾತನಾಡುವ ಕಲಾವಿದರ ಪರಿಪೂರ್ಣ ಅಭಿನಯ, ಲವಲವಿಕೆಯ ಮಾತುಗಾರಿಕೆ, ಕ್ಲೈಮ್ಯಾಕ್ಸ್ನಲ್ಲೊಂದು ವಿಶಿಷ್ಟತಿರುವು, ಎರಡನೇ ಭಾಗ ನೋಡಲು ಕುತೂಹಲ ಹುಟ್ಟಿಸುವ ಹಲವು ಪ್ರಶ್ನೆಗಳು.ಮಾತು ಮತ್ತು ನಟನೆಯ ಮೂಲಕ ನೋಡುಗರನ್ನು ಕೈಹಿಡಿದು ಜೊತೆಗೆ ಕರೆದೊಯ್ಯುವ ಶರಣ್, ಹಿನ್ನೆಲೆ ಸಂಗೀತದ ಮೂಲಕ ಸಿನಿಮಾದ ಥ್ರಿಲ್ ಹೆಚ್ಚಿಸಿರುವ ಅರ್ಜುನ್ ಜನ್ಯಾ, ಕ್ಯಾಮೆರಾದ ಮೂಲಕ ವಿಶಿಷ್ಟಜಗತ್ತನ್ನು ಸೃಷ್ಟಿಸಿರುವ ವಿಲಿಯಂ ಡೇವಿಡ್, ತನ್ನೆಲ್ಲಾ ಲೈವ್ಲಿನೆಸ್ ಅನ್ನು ಸಿನಿಮಾದಲ್ಲಿ ತರಲು ಯತ್ನಿಸಿರುವ ನಿರ್ದೇಶಕ ಸಿಂಪಲ್ ಸುನಿ.
ಇಲ್ಲಿನ ಅನೇಕ ಪಾತ್ರಗಳಿಗೆ ಭಾವನಾತ್ಮಕ ಬಂಧ ಇದೆ. ಆದರೆ ಆ ಭಾವನಾತ್ಮಕತೆಯನ್ನು ಹಿಂದಿಕ್ಕಿ ರೋಚಕತೆ ಮೇಲುಗೈ ಸಾಧಿಸಿದೆ. ಮುಂದೇನಾಗುತ್ತದೆ ಅನ್ನುವ ಗುಣವೇ ಈ ಸಿನಿಮಾದ ಸೂತ್ರ. ಬಾಹುಬಲಿಯಲ್ಲಿ ಕಟ್ಟಪ್ಪ ಯಾಕೆ ಕೊಂದ ಅನ್ನುವ ಪ್ರಶ್ನೆಯೊಂದೇ ಉಳಿದಿತ್ತು. ಇಲ್ಲಿ ಮಾತ್ರ ಕಿಟ್ಟಪ್ಪ ಯಾರು ಅನ್ನುವುದರಿಂದ ಹಿಡಿದು ತ್ರಿಶಂಕು ಲೋಕದ ದೊಡ್ಡಪ್ಪ ಯಾರು ಅನ್ನುವವರೆಗೆ ಅನೇಕ ಪ್ರಶ್ನೆಗಳು ಉಳಿದುಕೊಂಡಿವೆ.