ಯಲಬುರ್ಗಾ-ಜಿಲ್ಲಾ ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ನಡೆದ ಯುವಮೊರ್ಚಾ ಪದಾಧಿಕಾರಿಗಳ ಆಯ್ಕೆಯಲ್ಲಿ ತಾಲೂಕಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದು ಬಿಜೆಪಿಯನ್ನು ಬೆಂಬಲಿಸಿದ್ದ ಪಂಚಮಸಾಲಿ ಹಾಗೂ ವಾಲ್ಮೀಕಿ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಬಿಜೆಪಿ ಯುವ ಮುಖಂಡ ಶಶಿಧರ ಕೆ.ನಾಯಕ ಆರೋಪಿಸಿದರು.
ಪ್ರಜಾವಾಹಿನಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ನಾವು ಯಾವಾಗಲು ಅತ್ಯಂತ ಶ್ರದ್ಧೆ ಹಾಗೂ ನಿಷ್ಠೆಯಿಂದ ಪಕ್ಷದ ಕಾರ್ಯಚಟುವಟಿಕೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಉತ್ತಮವಾದ ಕಾರ್ಯ ಮಾಡುತ್ತಿದ್ದೇವೆ ಆದರೆ ಯುವ ಮೋರ್ಚಾ ಪದಾಧಿಕಾರಿಗಳ ಆಯ್ಕೆಯನ್ನು ಮಾಡುವಾಗ ಯಾವ ಮಾನದಂಡವನ್ನು ಅನುಸರಿಸದೆ ಹಾಗೂ ಪಕ್ಷಕ್ಕಾಗಿ ದುಡಿದವರನ್ನು ಪರಿಗಣಿಸದೆ ತಮಗೆ ಇಷ್ಟ ಬಂದವರನ್ನು ನೇಮಕ ಮಾಡಿರುವದು ಸರಿಯಾದ ಕ್ರಮವಲ್ಲಾ ಕೂಡಲೇ ಜಿಲ್ಲಾ ಅಧ್ಯಕ್ಷರು ಅನ್ಯಾಯವನ್ನು ಸರಿಪಡಿಸಬೇಕು ಎಂದರು.
ಮೊದಲನೆಯ ಪಟ್ಟಿಯಲ್ಲಿ ಯಲಬುರ್ಗಾದಲ್ಲಿ ಪಕ್ಷವನ್ನು ಕಟ್ಟುವಲ್ಲಿ ಅತ್ಯಂತ ಶ್ರಮವಹಿಸಿದ ಯುವ ನಾಯಕ ಮಹೇಶ ಭೂತೆಯವರನ್ನು ಜಿಲ್ಲಾ ಯುವಮೊರ್ಚಾದ ಉಪಾಧ್ಯಕ್ಷರನ್ನಾಗಿ ಹಾಗೂ ಕಾರ್ಯಕಾರಿ ಸದಸ್ಯನನ್ನಾಗಿ ನನ್ನ ಹೆಸರು ಪಟ್ಟಿಯಲ್ಲಿ ಇತ್ತು ಆದರೆ ಈಗ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ನನ್ನ ಮತ್ತು ಮಹೇಶ ಭೂತೆಯವರ ಇಬ್ಬರ ಹೆಸರನ್ನು ತೆಗೆದು ಹಾಕಿ ಬಿಜೆಪಿಯಲ್ಲಿ ವಾಲ್ಮೀಕಿ ಹಾಗೂ ಪಂಚಮಸಾಲಿ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಹೇಳಿದರು.