ಹೆದ್ದಾರಿ 4ರ ಬ್ರಿಡ್ಜ್ ಬಳಿ ಅಪರಿಚಿತ ಶವ ಪತ್ತೆ

ಹೆದ್ದಾರಿ 4ರ ಬ್ರಿಡ್ಜ್ ಬಳಿ ಅಪರಿಚಿತ ಶವ ಪತ್ತೆ

ನೆಲಮಂಗಲ: ಆಗಸ್ಟ್ 5ರಂದು ಹೆದ್ದಾರಿ4ರ ಬ್ರಿಡ್ಜ್ ಬಳಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ನೆಲಮಂಗಲ ಟೌನ್ ಪೊಲೀಸರು ಅನುಮಾನಾಸ್ಪದ ಸಾವೆಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

ಇದೀಗ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಲಗ್ಗೆರೆ ಮಂಜುನಾಥ್ (31), ಅರಿಶಿನಕುಂಟೆಯ ಅಬ್ದುಲ್ ಸಲಾಂ(34), ಸುನೀಲ್(26),ಶರಣ್ ಗೌಡ(27) ಬಂಧಿತ ಆರೋಪಿಗಳು.

ಸಂತೋಷ್(32) ಮೃತ ದುರ್ದೈವಿ.

4 ಜನ ಆರೋಪಿಗಳು ಆ.5 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಚಂದು ಡಾಬಾದಲ್ಲಿ ಕಂಠಪೂರ್ತಿ ಕುಡಿದಿದ್ದರು. ಮದ್ಯದ ಅಮಲಿನಲ್ಲಿ ಕಾರು ಚಾಲನೆ ಮಾಡಿ ನೆಲಮಂಗಲ ಟೌನ್ ದಾನೋಜಿಪಾಳ್ಯ ಬಳಿ ಪಾದಚಾರಿ ಸಂತೋಷ್ಗೆ ಕಾರಿನಿಂದ ಗುದ್ದಿ ಪರಾರಿಯಾಗಿದ್ದರು.

ಸಂತೋಷ್ ಮೃತ ದೇಹ ಹೆದ್ದಾರಿ4ರ ಬ್ರಿಡ್ಜ್ ಬಳಿ ಪತ್ತೆಯಾಗಿತ್ತು. ವಿಷಯ ತಿಳಿದ ನೆಲಮಂಗಲ ಟೌನ್ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಕುರಿತು ತಿನಿಖೆ ನಡೆಸುವಾಗ ಪೊಲೀಸರಿಗೆ ಮೃತ ಸಂತೋಷ್ ರಸ್ತೆ ಪಕ್ಕದಲ್ಲಿ ನಡೆದು ಬರುತ್ತಿದ್ದ ಸಿಸಿಟಿವಿ ದೃಶ್ಯ ಲಭ್ಯವಾಗಿದೆ.

ಇದರ ಅಧಾರದ ಮೇಲೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೀಗ ತನಿಖೆ ಪೂರ್ಣಗೊಳಿಸಿ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿದ್ದಾರೆ.

ವರದಿಗಾರ: ಕೋಲಾರ ರೆಡ್ಡಿ

Related