ಬೆಂಗಳೂರು: ನಾನು ಯಾರತ್ರನು ಸುಮಲತಾ ಸುದ್ದಿ ಬಗ್ಗೆ ಮಾತಾಡಿಲ್ಲ. ನನಗೆ ಸುಮಲತಾ ಸುದ್ದಿನೂ ಬೇಡ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದರು.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ವಿಷ ಹಾಕಿದ್ದಾರೆ ಅಂತ ಹೇಳಿದರು ಅದು ಯಾವ ವಿಷಯ ಎಂದು ಪ್ರಶ್ನಿಸಿದರು.
ಕುಂಬಳಕಾಯಿ ಕಳ್ಳ ಎಂದರೆ ಯಾಕೆ ಇವರು ಹೆಗಲು ಮುಟ್ಟಿಕೊಂಡು ನೋಡಿಕೊಳ್ಳುತ್ತಾರೆ. ಅಂಬರೀಶ್ ಗೆ ಕಾಂಗ್ರೆಸ್ ಪಾರ್ಟಿ ಏನಿಲ್ಲ ಮಾಡಿದೆ ಎಂದು ಇಡೀ ದೇಶಕ್ಕೆ ಗೊತ್ತಿದೆ. ಪಾಪ ಸುಮಲತಾ ಅವರು ಯಾಕೆ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ ಎಂದು ನನಗೆ ಗೊತ್ತಿಲ್ಲ. ನಾನು ಸುಮಲತಾ ಅವರ ಸುದ್ದಿಗೆ ಯಾವತ್ತು ಹೋಗಿಲ್ಲ. ಇವತ್ತು ಹೋಗಲ್ಲ ಎಂದಿಗೂ ಹೋಗಲ್ಲ ಹೇಳಿದರು.
ನಾವು ಜನರ ಭಾವನೆಗಳ ಮೇಲೆ ರಾಜಕಾರಣ ಮಾಡ್ತಿಲ್ಲ. ಜನರ ಬದುಕಿನ ಮೇಲೆ ರಾಜಕಾರಣ ಮಾಡ್ತೀವಿ. 28 ಲೋಕಸಭಾ ಕ್ಷೇತ್ರಗಳಲ್ಲಿ ಎಂಟು ಮಂದಿ ಒಕ್ಕಲಿಗರಿಗೆ ಟಿಕೆಟ್ ಕೊಟ್ಟಿದ್ದೇವೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಕೊಟ್ಟ ಮಾತನ್ನ ಉಳಿಸಿಕೊಂಡಿದ್ದೇವೆ. ಐದೂ ಗ್ಯಾರೆಂಟಿಗಳನ್ನ ಅನುಷ್ಠಾನಗೊಳಿಸಿದ್ದೇವೆ. ಈ ಮಗಳು ನನ್ನ ಮನೆ ಮಗಳು, ಐಶ್ವರ್ಯ ಬೇರೆ ಅಲ್ಲ, ಸೌಮ್ಯಾ ರೆಡ್ಡಿ ಬೇರೆ ಅಲ್ಲ. ನನ್ನ ಮಗಳೆಂದು ಭಾವಿಸಿ ಗೆಲ್ಲಿಸಿಕೊಡಿ ಎಂದು ರೋಡ್ ಶೋನಲ್ಲಿ ಸೌಮ್ಯಾ ರೆಡ್ಡಿ ಪರ ಮತ ಯಾಚನೆ ಮಾಡಿದರು.