ಪಿಂಚಣಿಗೆ ಲಂಚ ಕೇಳಿದ ಅಧಿಕಾರಿ ವಿರುದ್ದ ಕ್ರಮ: ಡಿಸಿಎಂ

ಪಿಂಚಣಿಗೆ ಲಂಚ ಕೇಳಿದ ಅಧಿಕಾರಿ ವಿರುದ್ದ ಕ್ರಮ: ಡಿಸಿಎಂ

ಬೆಂಗಳೂರು: ವೃದ್ಧಾಪ್ಯ ವೇತನ ನೀಡಲು ವೃದ್ಧೆ ಬಳಿ 4 ಸಾವಿರ ಲಂಚ ಕೇಳಿದ ಅಧಿಕಾರಿ ವಿರುದ್ಧ ಕ್ರಮ, ಸರ್ಕಾರಿ ಪ್ರೌಢಶಾಲಾ ಶಾಲೆ ಕಟ್ಟಿಸಿಕೊಡಿ, ನಮ್ಮ ಏರಿಯಾ ಜನರಿಗೆ ಕುಡಿಯುವ ನೀರು, ಸ್ಮಶಾನಕ್ಕೆ ಜಾಗ ಬೇಕು, ಅಂಗನವಾಡಿ, ಸಂಚಾರ ದಟ್ಟಣೆ, ಪಾರ್ಕ್ ಸಮಸ್ಯೆ ಬಗೆಹರಿಸಿ ಎಂದು ಸಲ್ಲಿಸಿದ ಸಾವಿರಾರು ಅರ್ಜಿಗಳನ್ನು ಸ್ವೀಕರಿಸಿ ಕಾನೂನಾತ್ಮಕ ಪರಿಹಾರದ ಭರವಸೆ ನೀಡಿದ ಡಿಸಿಎಂ.

ಇಂದು (ಗುರುವಾರ ಜ.11) ರಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ, ಜರಗನಹಳ್ಳಿ ಸರ್ಕಾರಿ ಶಾಲಾ ಆಟದ ಮೈದಾನದಲ್ಲಿ ನಡೆದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.

ಒಂದಷ್ಟು ಹೊತ್ತು ವೇದಿಕೆಯ ಮೇಲೆ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಡಿಸಿಎಂ ಅವರು, ಅಪಾರ ಸಂಖ್ಯೆಯಲ್ಲಿ ಜನರು ಅಹವಾಲು ಸಲ್ಲಿಸಲು ಬಂದಿದ್ದನ್ನು ಕಂಡು ವೇದಿಕೆಯಿಂದ ಇಳಿದು ಜನರು ಇದ್ದಲಿಯೇ ತೆರಳಿ ಅವರ ಮನವಿಗಳನ್ನು ಆಲಿಸಿ ಪರಿಹಾರ ಸೂಚಿಸಿದರು. ಸುಮಾರು 5 ಗಂಟೆಯ ಹೊತ್ತಿಗೆ ಊಟಕ್ಕೆ ತೆರಳಿದ ಡಿಸಿಎಂ ಅವರು ಆನಂತರ ಮತ್ತೆ ಅಹವಾಲು ಸ್ವೀಕರಿಸಲು ಪ್ರಾರಂಭಿಸಿದರು.

ಅಧಿಕಾರಿಗಳ ಕಾರ್ಯವೈಖರಿಯಲ್ಲಿ ಬದಲಾವಣೆಯಾಗಿದೆ

ಈ ಮೊದಲು ಯಾವ ಅಧಿಕಾರಿಗಳೂ ತಮ್ಮ ಹುದ್ದೆ ಮತ್ತು ಹೆಸರಿನ ಬೋರ್ಡನ್ನು ಹಾಕಿಕೊಳ್ಳುತ್ತಿರಲಿಲ್ಲ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದನಂತರ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಜೆ.ಪಿ.ನಗರದ ಸುರೇಂದ್ರನಾಥ್ ಅವರು ಸರ್ಕಾರ ಮತ್ತು ಡಿಸಿಎಂ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಕೊರೋನಾ ಸಮಯದಲ್ಲಿ ಮುಚ್ಚಿರುವ ಉದ್ಯಾನಗಳನ್ನು ತೆರೆಯಿರಿ ಎಂದು ಸುರೇಂದ್ರನಾಥ ಅವರು ಮನವಿ ನೀಡಿದಾಗ. “ಉದ್ಯಾನಗಳನ್ನು ಸಾರ್ವಜನಿಕರ ಬಳಕೆಗೆ ತೆರೆಯಿರಿ” ಎಂದು ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ನೀಡಿದರು.

ಎಸ್‌ಡಿಎಂಸಿ, ಸಿಡಿಸಿ ಸಮಿತಿಗಳಲ್ಲಿ ಕಳೆದ 15 ವರ್ಷಗಳಿಂದ ಒಂದೇ ಪಕ್ಷದವರು ಆಡಳಿತ ಮಾಡುತ್ತಿದ್ದಾರೆ. ನಮಗೂ ಅವಕಾಶ ನೀಡಿ ಎಂಬ ಬೊಮ್ಮನಹಳ್ಳಿಯ ಅನಿಲ್ ಅವರ ಮನವಿಗೆ “ಸಮಿತಿಗಳಿಗಳಲ್ಲಿ ಎಲ್ಲಾ ಸಾರ್ವಜನಿಕರಿಗೂ ಅವಕಾಶ ಕಲ್ಪಿಸುವಂತೆ ನೋಡಿಕೊಳ್ಳಲಾಗುವುದು” ಎಂದರು ಡಿಸಿಎಂ.

‘ರೋಗ- ರುಜಿನಗಳು, ಅಂಗವಿಕಲವಾಗಿರುವ ಪ್ರಾಣಿಗಳನ್ನು ಸಾಕಲು ಒಂದು ಜಾಗ ನೀಡಿ’ ಎಂದು ವೀಣಾ ಕೇಶವಮೂರ್ತಿ  ಎಂಬುವರು ಮನವಿ ಸಲ್ಲಿಸಿದಾಗ “ಜಾಗ ನೀಡುವ ಕುರಿತು ಪರಿಶೀಲನೆ ಮಾಡಲಾಗುವುದು” ಎಂದು ಭರವಸೆ ನೀಡಿದರು.

 

Related