ಹೊಸಪೇಟೆ : ನಗರಸಭೆಯ ಪರಿಸರ ಎಂಜಿನಿಯರ್ ಆರತಿ, ಆರೋಗ್ಯ ಇನ್ಸ್ಪೆಕ್ಟರ್ ವೆಂಕಟೇಶ್ ಅವರು, ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯ ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿದರು.
ಹಣ ಪಡೆದು ಊಟ ಕೊಡುತ್ತಿದ್ದಾರೆ ಎಂಬ ದೂರುಗಳು ಬಂದಿದೆ. ಯಾರೂ ಆ ರೀತಿ ಮಾಡಬಾರದು. ಯಾರೇ ಬರಲಿ, ಉಚಿತ ಉಪಾಹಾರ, ಊಟ ಕೊಡಬೇಕು. ಇಲ್ಲವಾದಲ್ಲಿ ಕ್ರಮ ಜರುಗಿಸಲಾಗುವುದು’ ಎಂದು ಅಲ್ಲಿನ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
ಹಣ ಪಡೆದು ಉಪಾಹಾರ, ಊಟ ಕೊಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದರಿಂದ ಗುರುವಾರ ನಗರಸಭೆಯ ಅಧಿಕಾರಿಗಳು ನಗರದ ಇಂದಿರಾ ಕ್ಯಾಂಟೀನ್ಗಳಿಗೆ ಭೇಟಿ ನೀಡಿ ಅದರ ನಿರ್ವಾಹಕರು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು, ಉಚಿತವಾಗಿ ಒದಗಿಸಲು ಕ್ರಮಕೈಗೊಂಡರು.
ಕೋವಿಡ್-19 ನಿಷೇಧಾಜ್ಞೆ ಮುಗಿಯುವವರೆಗೆ ಇಂದಿರಾ ಕ್ಯಾಂಟೀನ್ಗಳಲ್ಲಿ ಉಚಿತವಾಗಿ ಆಹಾರ ಕೊಡಬೇಕು ಎಂದು ಸರ್ಕಾರ ನಿರ್ದೇಶನ ಕೊಟ್ಟಿದೆ. ಬೆಳಿಗ್ಗೆ ಮಧ್ಯಾಹ್ನ ಹಾಗೂ ಸಂಜೆ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಆಹಾರ ಪೂರೈಸಬೇಕು. ಎಷ್ಟೇ ಜನ ಬಂದರೂ ಕೊಡಬೇಕು. ಯಾವುದೇ ಸಬೂಬು ಹೇಳಬಾರದು. ಸ್ವಚ್ಛತೆಗೆ ಹೆಚ್ಚಿನ ಒತ್ತು ಕೊಡಬೇಕು. ನಿಯಮ ಮೀರಿದರೆ ಟೆಂಡರ್ ರದ್ದುಪಡಿಸಲಾಗುವುದು ಎಂದು ಆರತಿ ಎಚ್ಚರಿಸಿದರು.