ಮರಣ ಸಂಖ್ಯೆ ಕಡಿಮೆ ಮಾಡುವುದೇ ಗುರಿ

ಮರಣ ಸಂಖ್ಯೆ ಕಡಿಮೆ ಮಾಡುವುದೇ ಗುರಿ

ಬೆಂಗಳೂರು: ಕೊರೋನಾ ಮಹಾಮಾರಿ ತಂದೊಡ್ಡಿರುವ ಸವಾಲುಗಳನ್ನು ನಿಭಾಯಿಸಿ ನಮ್ಮ ಗುರಿ ಸಾಧಿಸುತ್ತೇವೆ ಎಂಬ ಭರವಸೆಯನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ವ್ಯಕ್ತಪಡಿಸಿದರು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ಕಚೇರಿಯಲ್ಲಿ ಎಲ್ಲಾ ಅಧಿಕಾರಿಗಳ ಸಭೆ ಕರೆದು ಅವರು ಮಾತನಾಡಿದರು.

ಕೊರೋನಾ ಪಾಸಿಟಿವ್ ಮಂದಿಗೆ ಅತೀ ವೇಗದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡುವುದು ಹಾಗೂ ಮರಣ ಸಂಖ್ಯೆ ತಗ್ಗಿಸುವುದು ನಮ್ಮ ಮುಂದಿರುವ ಗುರಿಗಳು. ಇವುಗಳನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸಕ್ರೀಯ ಶಾಸಕ ಸತೀಶ್ ರೆಡ್ಡಿ ಹಾಗೂ ಬೆಂಗಳೂರು ದಕ್ಷಿಣ ಎಂ. ಕೃಷ್ಣಪ್ಪ ಅವರ ಸಹಕಾರದಿಂದ ಆದಷ್ಟು ಬೇಗ ಸಾಧಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೊರೋನಾ ಪರೀಕ್ಷಾ ವರದಿಗಳು ಬರುತ್ತಿರುವುದು ತೀರಾ ವಿಳಂಬವಾಗುತ್ತಿದೆ. ಆದ ಕಾರಣ ಕೇವಲ 2-3 ಗಂಟೆಗಳಲ್ಲಿ ತಪಾಸಣಾ ವರದಿಗಳು ತಲುಪುವಂತೆ ಮಾಡಲು ಕ್ರಮ ಕೈಗೊಂಡಿದ್ದೇವೆ. ಹಾಸಿಗೆ ವ್ಯವಸ್ಥೆ, ಆಂಬುಲೆನ್ಸ್‍ಗಳ ವ್ಯವಸ್ಥೆಯನ್ನು ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಶಾಸಕ ಸತೀಶ್ ರೆಡ್ಡಿ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಎಂ. ಕೃಷ್ಣಪ್ಪ, ಹಿರಿಯ ಐಎಎಸ್ ಅಧಿಕಾರಿ ಮಣಿವಣ್ಣನ್, ಬಿಬಿಎಂಪಿ ಜಂಟಿ ಆಯುಕ್ತ ರಾಮಕೃಷ್ಣ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Related