ಮಲೇರಿಯಾ ಮುಕ್ತ ರಾಜ್ಯ – ಕೆ.ಸುಧಾಕರ್‌

ಮಲೇರಿಯಾ ಮುಕ್ತ ರಾಜ್ಯ – ಕೆ.ಸುಧಾಕರ್‌

ಮಲೇರಿಯಾ ಹೆಚ್ಚಿರುವ ಪ್ರದೇಶಗಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಿ, 2025 ಕ್ಕೆ ಮಲೇರಿಯಾ ಮುಕ್ತ ಕರ್ನಾಟಕದ ಗುರಿ, ನಿರ್ಮೂಲನೆ ಬಳಿಕವೂ ಕ್ರಮ ಅಗತ್ಯ.

ಬೆಂಗಳೂರು, ಜುಲೈ 16 : ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಸಂಪೂರ್ಣ ನಿರ್ಮೂಲನೆಗೆ ಜನ ಸಮುದಾಯದಲ್ಲಿ ಅರಿವು ಮೂಡಿಸುವುದು ಕೂಡ ಅವಶ್ಯ. ಮಲೇರಿಯಾ ಹೆಚ್ಚಿರುವ ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿ ಜನರೇ ಮುನ್ನೆಚ್ಚರಿಕೆ ಕ್ರಮ ವಹಿಸಲು ತಿಳಿಸಿಕೊಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸೂಚನೆ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಧಾನಸೌಧದಲ್ಲಿ ಆಯೋಜಿಸಿದ್ದ, 2025 ರ ವೇಳೆಗೆ ಕರ್ನಾಟಕವನ್ನು ಮಲೇರಿಯಾ ಮುಕ್ತ ಮಾಡುವ ವಿಷಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಸಚಿವರು, ಮಲೇರಿಯಾಗೆ ಹಿಂದೆ ಸರಿಯಾದ ತಪಾಸಣಾ ವ್ಯವಸ್ಥೆಯೇ ಇರಲಿಲ್ಲ. ಇದರಿಂದಾಗಿ ಸಾವುಗಳು ಸಂಭವಿಸುತ್ತಿತ್ತು. 80, 90 ರ ದಶಕದಲ್ಲಿ ಯಾವುದೇ ಜ್ವರ ಬಂದರೂ ಮೊದಲು ಮಲೇರಿಯಾ ತಪಾಸಣೆ ಮಾಡಲು ಆರಂಭವಾಯಿತು. ಈ ರೀತಿ ಸರ್ಕಾರ ತಪಾಸಣೆ ಹಾಗೂ ಅರಿವು ಕಾರ್ಯಕ್ರಮಗಳ ಮೂಲಕ ಕ್ರಮ ವಹಿಸುತ್ತಿದೆ. ಯಾವುದೇ ರೋಗದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವುದು ಹೆಚ್ಚು ಅಗತ್ಯ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನವ ಕರ್ನಾಟಕ ನಿರ್ಮಾಣದ ಕನಸು ಕಂಡಿದ್ದಾರೆ. ಆರೋಗ್ಯ ಕರ್ನಾಟಕ ನಿರ್ಮಿಸಿದಾಗ ಮಾತ್ರ ಇದು ಸಾಧ್ಯ. ಮಲೇರಿಯಾ ಮಾತ್ರವಲ್ಲದೆ, ಕ್ಷಯ ರೋಗವನ್ನು ಕೂಡ ನಿರ್ಮೂಲನೆ ಮಾಡಬೇಕಿದೆ. ಮಲೇರಿಯಾ ನಿರ್ಮೂಲನೆಗೆ 2030 ರ ಗುರಿಯನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ ನಮ್ಮ ರಾಜ್ಯದಲ್ಲಿ 2025 ರ ಗುರಿ ಇರಿಸಿಕೊಳ್ಳಲಾಗಿದೆ. ಸರ್ಕಾರದ ಕೆಲಸ, ಸಂಘ, ಸಂಸ್ಥೆಗಳ ನೆರವು ಹಾಗೂ ಜನರ ಸಹಭಾಗಿತ್ವದಿಂದ ಇದು ಸಾಧ್ಯವಾಗುತ್ತದೆ. ಪ್ರತಿ ನಾಗರಿಕರು ತಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಈ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು ಎಂದರು.

Related