ನನಗೆ ಬೈಯ್ಯೋದಲ್ಲ ಮೊದಲು ಯತ್ನಾಳ್ ಬಾಯಿ ಮುಚ್ಚಿಸಲಿ

ನನಗೆ ಬೈಯ್ಯೋದಲ್ಲ ಮೊದಲು ಯತ್ನಾಳ್ ಬಾಯಿ ಮುಚ್ಚಿಸಲಿ

ಬೆಂಗಳೂರು : ಅನ್ನ ಭಾಗ್ಯ ಯೋಜನೆ ವಿಚಾರದ ಬಗ್ಗೆ ಮಾತನಾಡುವಾಗ ಸರ್ಕಾರಿ ದುಡ್ಡು ಯಾರಪ್ಪನ ಮನೆ ದುಡ್ಡಲ್ಲ ಎಂದಿದ್ದೆ. ಅದು ಬೈಗುಳವೇ? ಮೊದಲು ಯಡಿಯೂರಪ್ಪ ಯತ್ನಾಳ್‌ಗೆ ಬೈದು ಬಾಯಿ ಮುಚ್ಚಿಸಲಿ. ನನಗೆ ಬೈಯ್ಯೋದಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ನಲವತ್ತು ವರ್ಷದ ಅನುಭವವಿದೆ. ಇದು ಯಡಿಯೂರಪ್ಪ ಮನೆ ಹಣ ಅಲ್ಲ, ಸರ್ಕಾರದ ಹಣ ಎಂದು ಹೇಳೋದು ಅಸಂವಿಧಾನಿಕ ಪದವೇ ಎಂದು ಪ್ರಶ್ನಿಸಿದರು.

ಜಾರಕಿಹೊಳಿ ಪ್ರಕರಣದ ಯುವತಿ ಮಾಜಿ ಸಚಿವ ಡಿ.ಸುಧಾಕರ್ ಜೊತೆ ಸಂಪರ್ಕ ಮಾಡಿರೋ ವಿಚಾರವಾಗಿ ಕೇಳಿದ ಪ್ರಶ್ನೆಗೆ ಆ ವಿಚಾರ ಯಾವುದು ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರ ಮಾತನಾಡಲ್ಲ ಎಂದರು.

ಕೊರೋನಾ ನಿಯಮ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಇಲ್ಲಿಯವರೆಗೂ ವಿಪಕ್ಷದವರನ್ನ ಕರೆದು ಮಾತನಾಡಿಲ್ಲ. ನಾನೇ ಅವರಿಗೆ ಪತ್ರ ಬರೆದಿದ್ದೇನೆ. ಈವರೆಗೂ ನಮ್ಮನ್ನ ಕರೆದು ಮಾತನಾಡಿಲ್ಲ ಎಂದರು.

ಯುವತಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಯಿಸಿದ ಸಿದ್ದರಾಮಯ್ಯ, ಅವರಿಗೆ ಎಸ್.ಐ.ಟಿ ಮೇಲೆ ನಂಬಿಕೆ ಇಲ್ಲ ಅಂದರೆ ಬೇರೆ ತನಿಖೆ ಮಾಡಲಿ. ನಾನು ಈ ಬಗ್ಗೆ ಸದನದಲ್ಲೂ ಪ್ರಸ್ತಾಪ ಮಾಡಿದ್ದೆ. ಎಸ್.ಐ.ಟಿ ಸರ್ಕಾರದ ಮುಷ್ಠಿಯಲ್ಲಿ ಇರಲಿದೆ. ಅದಕ್ಕಾಗಿ ಸಿಜೆ ತನಿಖೆ ನಡೆಸುವಂತೆ ಸೂಚಿಸಿದ್ದೆ ಎಂದರು.

Related