ಶಹಾಪುರ: ಕೊರೊನಾದಿಂದಾಗಿ ಕಾರ್ಮಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿತರಿಸುತ್ತಿರುವ ಆಹಾರ ಕಿಟ್ ತುಂಬಾ ಸಹಕಾರಿಯಾಗಿದೆ. ಜನರ ಬದುಕಿಗೆ ಆಸರೆಯಾಗಿದೆ ಎಂದು ಪತ್ರಕರ್ತ ಮಲ್ಲಿಕಾರ್ಜುನ ಮುದನೂರ ತಿಳಿಸಿದರು. ನಗರದ ಜಾಲಗಾರ ಬಡವಾಣೆಯಲ್ಲಿ ಸುಮಾರು 30 ಅರ್ಹ ಕಾರ್ಮಿಕರಿಗೆ ಕಿಟ್ ವಿತರಿಸಿ ಅವರು ಮಾತನಾಡಿದರು.
ಕಿಟ್ ಪಡೆಯಲು ಕಾರ್ಮಿಕ ಇಲಾಖೆಯಡಿ ಕಾರ್ಮಿಕ ಎಂಬ ಸದಸ್ಯತ್ವ ಪಡೆದಿರಬೇಕು. ಕೆಲಸ ಮಾಡುವ ಮಾಲೀಕರಿಂದ ದೃಢಿಕರಣ ಪತ್ರ ಸೇರಿದಂತೆ ಆಧಾರ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಒಂದು ಫೋಟೊ ಕಾರ್ಮಿಕ ಇಲಾಖೆಗೆ ನೀಡಿ ಸದಸ್ಯತ್ವ ಪಡೆದವರಿಗೆ ಇಲಾಖೆ ಕಿಟ್ ನೀಡಲಿದೆ. ಅಲ್ಲದೆ ಸದಸ್ಯತ್ವದಿಂದ ವಿಮೆ, ಮಕ್ಕಳಿಗೆ ಸ್ಕಾಲರ್ಶಿಪ್ ಸೇರಿದಂತೆ ಹತ್ತು ಹಲವಾರು ಸೌಲಭ್ಯಗಳಿವೆ. ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರು, ಕೆಲಸ ಮಾಡುವ ಕಾರ್ಯಗಾರರು ಸದಸ್ಯತ್ವ ಮಾಡಿಸುವ ಮೂಲಕ ಸೌಲಭ್ಯ ಪಡೆಯಲು ಮುಂದಾಗಬೇಕು. ತಮಗೆ ತಿಳಿಯದಿದ್ದ ಪಕ್ಷದಲ್ಲಿ ಕಾರ್ಮಿಕರ ಸೇವೆಗಾಗಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟ ಕೆಲಸ ಮಾಡುತ್ತಿದೆ. ಇಲ್ಲಿನ ತಾಲೂಕು ಘಟಕದ ಅಧ್ಯಕ್ಷ, ಪದಾಧಿಕಾರಿಗಳಿಗೆ ಭೇಟಿಯಾಗಿ ಸಂಘದ ಸದಸ್ಯತ್ವ ಪಡೆಯಬೇಕೆಂದು ಸಲಹೆ ನೀಡಿದರು.
ಈ ವೇಳೆ ಒಕ್ಕೂಟದ ಜಿಲ್ಲಾಧ್ಯಕ್ಷ ಚಾಂದಪಾಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ನಗನೂರ, ಮುಖಂಡರಾದ ಮಹ್ಮದ್ ಅಲಿ ಮಕ್ತಾಪುರ, ಖಾಸಿಂಸಾಬ, ರಶೀದಾಬೇಗಂ ಇನ್ನಿತರರಿದ್ದರು.