ಬೆಳಗಾವಿ: ಕಾಂಗ್ರೆಸ್ ಪಕ್ಷವು ಚುನಾವಣೆಗೂ ಮುನ್ನ ಜನರಿಗೆ ಇಲ್ಲದ ಸಲದ ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದಿದೆ.
ಹೌದು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ಗೆ ಈಗಾಗಲೇ ಅಧಿಕಾರದ ಅಮಲು ಏರಿದೆ. ಪ್ರತಿ ಯೊಬ್ಬ ಸಚಿವರೂ ವಿವಾದಾತ್ಮಕ ಮತ್ತು ಜನವಿರೋಧಿ ಹೇಳಿಕೆ ನೀಡು ತ್ತಿದ್ದಾರೆ. ಇದನ್ನು ನೋಡಿದರೆ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ದಿನಗಳು ಬರುವ ಆತಂಕ ಕಾಣುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಒಬ್ಬ ಸಚಿವರು ಗೋಹತ್ಯೆ ನಿಷೇಧ ಕಾನೂನು ತಿದ್ದುಪಡಿ ಮಾಡುತ್ತೇವೆ ಎನ್ನುತ್ತಾರೆ. ಇನ್ನೊಬ್ಬ ಸಚಿವರು ಸರಕಾರದ ವಿರುದ್ಧ ಮಾತನಾಡಿದರೆ ಜೈಲಿಗೆ ಹಾಕುತ್ತಾರೆಂದು ಬೆದರಿಸುತ್ತಾರೆ. ಜನರ ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಪಶುಸಂಗೋಪನೆ ಸಚಿವರು ಗೋ ಹತ್ಯೆ ಕಾಯ್ದೆ ತಿದ್ದುಪಡಿ ಮಾಡುತ್ತೇವೆಂದು ಹೇಳಿದ್ದಾರೆ. ಇದಕ್ಕೆ ಕೆಲವು ಸಚಿವರು ದನಿಗೂಡಿಸಿದ್ದಾರೆ. ಗೋಹತ್ಯೆ ಕಾಯ್ದೆ ನಾವು ಜಾರಿ ಮಾಡಿದ್ದಲ್ಲ. 1960ರ ಅವಧಿಯಲ್ಲೇ ಇದು ಜಾರಿಗೆ ಬಂದಿದೆ. ನಾವು ಗೋ ಹತ್ಯೆ ಮಾಡಿದರೆ ಅದಕ್ಕೆ ಕಠಿನ ಶಿಕ್ಷೆ ಕಾಯ್ದೆ ಜಾರಿ ಮಾಡಿದ್ದೇವೆ. ಒಂದು ವೇಳೆ ಕಾಂಗ್ರೆಸ್ ಸರಕಾರ ಗೋ ಹತ್ಯೆ ಕಾಯ್ದೆ ತಿದ್ದುಪಡಿ ಮಾಡಲು ಮುಂದಾದರೆ ಖಂಡಿತ ಅದಕ್ಕೆ ಆಪತ್ತು ಕಾದಿದೆ ಎಂದು ಎಚ್ಚರಿಕೆ ನೀಡಿದರು.