ಚಿಕ್ಕಬಳ್ಳಾಪುರ,ಸೆ. 29: ರಾಜ್ಯದಲ್ಲಿ ಕಾವೇರಿ ನೀರಿನ ವಿವಾದದ ಕಿಚ್ಚು ಹೊತ್ತಿಕೊಂಡು ಅಖಂಡ ಕರ್ನಾಟಕ ಬಂದ್ ನಿಂದ ಸಂಪೂರ್ಣ ರಾಜ್ಯ ಸ್ತಭ್ದವಾಗಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದ್ದು, ಬಂದ್ನ ಬಿಸಿ ರೈತರಿಗೆ ನೇರವಾಗಿ ತಟ್ಟಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಹೂ ಬೆಳೆಗಾರರು ಬಂದ್ನ ಎಫೆಕ್ಟ್ ಜೋರಾಗಿದ್ದು, ಬೆಳೆ ಹೂಗಳು ಮಾರಾಟವಾಗದೆ ಕಂಗಾಲಾಗಿದ್ದಾರೆ.
ಬೆಳಗ್ಗೆಯಿಂದ ಕಾಯುತ್ತಿದ್ದರೂ ವ್ಯಾಪಾರಿಗಳು ಮಾರುಕಟ್ಟೆಗೆ ಬಾರದೆ ಕಂಗಾಲಾಗಿದ್ದಾರೆ. ದಿನನಿತ್ಯ ಬೆಂಗಳೂರು ಮತ್ತಿತರ ಕಡೆಗೆ ರವಾನೆಯಾಗಬೇಕಿದ್ದ ಹೂಗಳು ಬಂದ್ ಇರುವುದರಿಂದ ಬೀದಿಗಿಳಯದ ಕಾರಣ ಯಾವ ವರ್ತಕರೂ ಮಾರುಕಟ್ಟೆ ಕಡೆಗೆ ಸುಳಿದಿಲ್ಲ. ಇದರಿಂದ ಬಿಡಿಸಿದ ಹೂಗಳು ಕೊಳೆಯುವ ಸ್ಥಿತಿ ತಲುಪಿವೆ.
ಕಡಿಮೆ ಬೆಲೆ ಕೂಗುತ್ತಿದ್ದರೂ ಕೊಳ್ಳುವವರಿಲ್ಲದೆ ಮಾರುಕಟ್ಟೆ ಬಿಕೋ ಎನ್ನುತ್ತಿದೆ. ಕಷ್ಟಪಟ್ಟು ಬೆಳೆದ ಹೂಗಳ ಮಾರಾಟವಾಗದೆ ಅನ್ನದಾತ ತನ್ನ ಆಕ್ರೋಶ ಹೊರಹಾಕಿದರು. ಬೆಳಗಿನ ಜಾವದಿಂದ ಜನ ಮಾರುಕಟ್ಟೆ ಕಡೆ ಸುಳಿಯುತ್ತಿಲ್ಲ ಎಂದು ವರ್ತಕರು ಅಳಲು ತೋಡಿಕೊಂಡರು. ತಂದಿದ್ದ ಹೂಗಳನ್ನು ರಸ್ತೆಗೆ ಚೆಲ್ಲಿದ ಘಟನೆಯೂ ನಡೆದಿದೆ.