ಅಂತರರಾಜ್ಯ ನಕಲಿ ನೋಟು ಕಳ್ಳರ ಬಂಧನ

ಅಂತರರಾಜ್ಯ ನಕಲಿ ನೋಟು ಕಳ್ಳರ ಬಂಧನ

ಚಿಕ್ಕೋಡಿ, ಫೆ. 22:  ನಕಲಿ ನೋಟು ಸರಬರಾಜು ಮಾಡುತ್ತಿದ್ದ ಅಂತಾರಾಜ್ಯ ಕಳ್ಳರನ್ನು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರ ಕ್ರಾಸ್ ಬಳಿ ಎರಡು ಪ್ರತ್ಯೇಕ ವಾಹನಗಳಲ್ಲಿ ೨೩.೮೮ ಲಕ್ಷ ರೂ. ನಕಲಿ ಮತ್ತು 12 ಸಾವಿರ ರೂ.ಮೌಲ್ಯದ ಅಸಲಿ ನೋಟು ಸಾಗಿಸುವ ಸಂದರ್ಭದಲ್ಲಿ ಸಂಕೇಶ್ವರ ಠಾಣೆ ಪೊಲೀಸರು ದಾಳಿ ನಡೆಸಿ ಐವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರದ ಅಮರ ಶಂಕರ ಅಂಬೇಕರ (28), ಕಾಗಲ್ ತಾಲೂಕಿನ ಬೆಲ್ಲೋಳಿಬಾಚಲಿ ಗ್ರಾಮದ ದೈರ್ಯಶೀಲ ಬಾಬುರಾವ ಪಾಟೀಲ (42), ಬಾಬಾಸೋ ವಸಂತ ಪಾಟೀಲ (31) ಮತ್ತು ನಿಪ್ಪಾಣಿ ಪಟ್ಟಣದ ರಾಜೇಶ ಮಾರುತಿ ಮೋಹಿತೆ (48) ಮತ್ತು ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಅಶೋಕ ಶಂಕರ ತೇಲಿ(50) ಬಂಧಿತರು.

ಖಚಿತ ಮಾಹಿತಿ ಮೇರೆಗೆ ಸಂಕೇಶ್ವರ ಠಾಣೆ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ನೋಟಿನ ಬಂಡಲ್ ಮೇಲೆ ಕೆಳಗೆ 500ರೂ. ಮುಖ ಬೆಲೆಯ ನೋಟು ಇಟ್ಟು  ಮಧ್ಯದಲ್ಲಿ ನೋಟಿನ ಮಾದರಿಯ ಬಿಳಿ ಹಾಳೆಗಳನ್ನು ಇಡಲಾಗಿದೆ.  ಇಂತಹ 12 ಬಂಡಲ್ ನಕಲಿ ನೋಟು ಪತ್ತೆಯಾಗಿವೆ. ಪ್ರತಿ ಬಂಡಲ್ ನಲ್ಲಿ 2 ಲಕ್ಷ ರೂ. ನಕಲಿ ನೋಟುಗಳಿವೆ ಎಂದು ನಂಬುವ ಹಾಗೆ ಮಾಡಿ 1 ಲಕ್ಷ ರೂ .ಅಸಲಿ ನೋಟು ಕೊಟ್ಟರೆ 3 ಲಕ್ಷ ರೂ. ನಕಲಿ ನೋಟು ಕೊಡುವುದಾಗಿ ನಂಬಿಸಿ ಮೋಸ ಮಾಡುವ ಪ್ರಯತ್ನ ಮಾಡುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಿದ್ದಾರೆ.

ನಕಲಿ ನೋಟಿನ ಬಂಡಲ್ ನ ಎರಡೂ ಬದಿಗೆ ಅಸಲಿ ನೋಟು ಕಾಣುವ ರೀತಿಯಲ್ಲಿ ಬಣ್ಣ ಮಾಡಿ ಪ್ಲಾಸ್ಟಿಕ್ ನಿಂದ ಸುತ್ತಿಡಲಾಗಿತ್ತು. ಒಟ್ಟು 12 ಸಾವಿರ ರೂ. ಅಸಲಿ ನೋಟು ಮತ್ತು 23.88 ಲಕ್ಷ ರೂ. ನಕಲಿ ನೋಟು ವಶ ಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಲಕ್ಷ್ಮಣ ನಿಂಬರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಾಳಿ ಸಂದರ್ಭದಲ್ಲಿ ನೋಟುಗಳ ಜೊತೆಗೆ ಸಾಗಾಣಿಕೆಗೆ ಬಳಸುತ್ತಿದ್ದ ಬೊಲೇರೋ ಜೀಪ ಮತ್ತು ಸುಜುಕಿ ಸ್ವಿಫ್ಟ್ ಕಾರು ಹಾಗೂ 5 ವಿವಿಧ ಕಂಪನಿ ಮೊಬೈಲ್ ವಶ ಪಡಿಸಿಕೊಳ್ಳಲಾಗಿದೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related