ಕೆ.ಆರ್.ಪುರ, ಫೆ. 12: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗಗಳ ಅಭಿವೃದ್ಧಿಗೆ ಪ್ರತಿ ವರ್ಷ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಮೀಸಲಿಟ್ಟ ಹಣವನ್ನು ಪಲಾನುಭಾವಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಂ.ಪೂರ್ವ ತಾಲೂಕು ತಹಶಿಲ್ದಾರ್ ತೇಜಸ್ ಕುಮಾರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸಮತ ಸೈನಿಕ ದಳ ಇವರ ಸಂಯುಕ್ತ ಆಶ್ರಯದಲ್ಲಿ ಬೆಂ.ಪೂ.ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಸ್ಪೃಶ್ಯತೆ ನಿವಾರಣೆ ಮತ್ತು ಎಸ್.ಸಿ, ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ ಕುರಿತು ಬೀದಿ ನಾಟಕ ಮಾಡಿಸುವ ಜಾಗೃತಿ ಜಾತಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರ ಬಿಡುಗಡೆಗೊಳಿಸುವ ಹಣವನ್ನು ಅರ್ಹ ಫಲಾನುಬಾವಿಗಳಿಗೆ ತಲುಪಿಸುವ ಕಾರ್ಯ ಸಂಘ ಸಂಸ್ಥೆಗಳು ಮಾಡಬೇಕಾಗಿದೆ ಎಂದು ಸೂಚಿಸಿದರು.
ಕರ್ನಾಟಕ ಸಮತಾ ಸೈನಿಕ ದಳ ರಾಜ್ಯದ್ಯಕ್ಷ ಬಿ.ಚನ್ನ ಕೃಷ್ಣಪ್ಪ ನಂತರ ಮಾತನಾಡಿ, ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟ ಸಾವಿರಾರು ಕೋಟಿ ರೂ.ಗಳ ಹಣವನ್ನು 32 ಇಲಾಖೆಗಳಿಗೆ ಹಂಚಲಿದ್ದು, ಅದನ್ನು ಸಮರ್ಪಕವಾಗಿ ವೆಚ್ಚಮಾಡದ ಅಧಿಕಾರಿಗಳಿಗೆ 6 ತಿಂಗಳು ಜೈಲು ಶಿಕ್ಷೆ ಆಗಲಿದೆ ಎಂದು ಹೇಳಿದರು.
ಸರ್ಕಾರ ಜಾರಿಗೆ ತಂದ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಬೀದಿ ನಾಟಕದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು ಎಂದರು. ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆ 1989 ಮತ್ತು ಇತ್ತೀಚಿನ ತಿದ್ದುಪಡಿಗಳು ಹಾಗೂ ಇಲಾಖಾ ಕಾರ್ಯಕ್ರಮಗಳ ಅರಿವು ಮೂಡಿಸುವ ಜಾಗೃತಿ ಜಾಥವನ್ನು ಬೆಂಗಳೂರು ನಗರ ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಂ.ಪೂರ್ವ ತಾಲೂಕು ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿ ಸಿ.ಮಂಜುನಾಥ್, ಸಹಾಯಕ ನಿರ್ದೇಶಕರು ಮಧುಸೂದನ್, ತಾಲೂಕು ಪಂಚಾಯತ್ ಸದಸ್ಯ ಆದೂರು ಮುನಿರಾಜು, ಮುಖಂಡರಾದ ಎಂ.ಆರ್.ವೆಂಕಟೇಶ್, ಕಮಲಮ್ಮ, ವರದರಾಜು, ರಾಮಮೂರ್ತಿ, ಅನ್ನಯ್ಯ ಸೇರಿದಂತೆ ಇತರರು ಹಾಜರಿದ್ದರು.