ರಾಜಕಾರಣದಲ್ಲಿ ರೌಡಿಸಂ ಮಾಡುವುದನ್ನು ಸಹಿಸುವುದಿಲ್ಲ: ಬೊಮ್ಮಾಯಿ

ರಾಜಕಾರಣದಲ್ಲಿ ರೌಡಿಸಂ ಮಾಡುವುದನ್ನು ಸಹಿಸುವುದಿಲ್ಲ: ಬೊಮ್ಮಾಯಿ

ಹಾವೇರಿ: ರಾಜಕೀಯದಲ್ಲಿ ರೌಡಿಸಂ ಮಾಡುವುದನ್ನು ನಮ್ಮ ಕನ್ನಡ ನಾಡಿನ ಜನತೆ ಸಹಿಸುವುದಿಲ್ಲವೆಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರಿಗೆ ಸಲಹೆ ಕೊಡುವಷ್ಟು ಸಿಎಂ ಸಿದ್ದರಾಮಯ್ಯ ದೊಡ್ಡವರಲ್ಲ. ತುಮಕೂರಿನಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಮಾಜಿ ಪ್ರಧಾನಿ ದೇವೇಗೌಡರು ನಡೆಸುತ್ತಿರುವ ಸಭೆಗೆ ನುಗ್ಗಿ ದಾಂಧಲೆ ನಡೆಸಿರುವುದು ಖಂಡನೀಯ. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ವ್ಯಕ್ತ ಮಾಡಲು ನಮಗೆ ಅವಕಾಶ ಇದೆ. ಅದನ್ನು ಬಿಟ್ಟು ಮಾಜಿ ಪ್ರಧಾನಿ ಕನ್ನಡಿಗರ ಹೆಮ್ಮೆಯ ದೇವೇಗೌಡರ ಸಭೆಯಲ್ಲಿ ಆ ರೀತಿ ದಾಂಧಲೆ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ. ಜನರು ಎಲ್ಲವನ್ನೂ ನೋಡುತ್ತಾರೆ. ವಿಶೇಷವಾಗಿ ದೇವೇಗೌಡರು ಕನ್ನಡದ ಸಲುವಾಗಿ ಕನ್ನಡಿಗರಿಗಾಗಿ ಪಕ್ಷ ಬೇಧ ಮರೆತು ಹೋರಾಟ ಮಾಡಿದ್ದಾರೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ಕಾಂಗ್ರೆಸ್ ನ ಅನೇಕ ನಾಯಕರು ಮಹಿಳೆಯರ ಬಗ್ಗೆ ಸಾಕಷ್ಟು ಅವಮಾನಕಾರಕ ಹೇಳಿಕೆಗಳನ್ನು ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾದಿ ರಣದೀಪ್ ಸಿಂಗ್ ಸುರ್ಜೆವಾಲ ಮಹಿಳೆಯ ಬಗ್ಗೆ ಆಡಿರುವ ಮಾತಿಗೆ ಕಾಂಗ್ರೆಸ್ ನವರು ಸ್ಪಷ್ಟೀಕರಣ ನೀಡಲಿ, ರಾಜ್ಯದಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿವೆ. ಕಾಂಗ್ರೆಸ್ ನವರು ಅದನ್ನು ತಡೆಯುವ ಕೆಲಸ ಮಾಡಲಿ ಎಂದು ತಿರುಗೇಟು ನೀಡಿದರು.

 

Related