ಬೆಂಗಳೂರು, ಮಾಲ್ವೊಂದರಲ್ಲಿ ಚಿನ್ನದ ಸರ ಕಳೆದುಕೊಂಡ ಮಹಿಳೆಯೊಬ್ಬರು, ಅದನ್ನು ತಮಗೆ ಹಿಂದಿರುಗಿಸಿದ ಭದ್ರತಾ ಸಿಬ್ಬಂದಿಯೊಬ್ಬರಿಗೆ ಬರೆದ ಕೃತಜ್ಞತಾ ಪತ್ರವನ್ನು ಆರೋಗ್ಯ ಸಚಿವ ಕೆ ಸುಧಾಕರ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಮಹಿಳೆ ಕಳೆದುಕೊಂಡಿದ್ದ ಸುಮಾರು ೩೦ ಗ್ರಾಂ ತೂಕದ ಚಿನ್ನದ ಸರವನ್ನು ತಮ್ಮ ಗನ್ಮ್ಯಾನ್ ಅಂಜನ್ ಕುಮಾರ್ ಅವರು, ಪತ್ತೆ ಮಾಡಿ ಮಹಿಳೆಗೆ ಹಿಂದಿರುಗಿಸಿದ್ದರು ಎನ್ನಲಾಗಿದೆ. ಅಂಜನ್ ಅವರು ಸಮಾರು ೭ವರ್ಷಗಳಿಂದ ನನ್ನ ಗನ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇತ್ತೀಚೆಗೆ ಒಂದು ಚಿನ್ನದ ಆಭರಣ ಸಿಕ್ಕಿತ್ತು. ಶಾಪಿಂಗ್ ಮಾಲ್ನಲ್ಲಿ ಅದನ್ನು ಕಳೆದುಕೊಂಡಿದ್ದ ಮಹಿಳೆಯನ್ನು ಹುಡುಕಿ, ಹಿಂದಿರುಗಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಧನ್ಯವಾದ ಅರ್ಪಿಸಿ ಮಹಿಳೆ ಪತ್ರ ಬರೆದಿದ್ದಾರೆ. ಅದು ನನಗೆ ಹೆಮ್ಮೆ ತರಿಸಿದೆ. ವೆಲ್ ಡನ್ ಅಂಜನ್! ಎಂದು ಸುಧಾಕರ್ ಬರೆದುಕೊಂಡಿದ್ದಾರೆ. ಜುಲೈ ೧೦ ರಂದು ಅಂಜನ್ ಅವರು ಚಿನ್ನದ ಸರವನ್ನು ತಮಗೆ ಹಿಂದಿರುಗಿಸಿದ್ದಾಗಿ ಮಹಿಳೆಯು ಪತ್ರದಲ್ಲಿ ತಿಳಿಸಿದ್ದಾರೆ.