10 ಬಿಜೆಪಿ ಶಾಸಕರ ಅಮಾನತು!

10 ಬಿಜೆಪಿ ಶಾಸಕರ ಅಮಾನತು!

ಬೆಂಗಳೂರು: ಇಂದು ವಿಧಾನಸೌಧದಲ್ಲಿ ಸದನ ನಡೆಯುತ್ತಿರುವ ಸಂದರ್ಭದಲ್ಲಿ ಕೆಲವು ಬಿಜೆಪಿ ಶಾಸಕರು ಮುಖ್ಯವಾಗಿರುವಂತಹ ಫೈಲ್ಗಳನ್ನು ಹರಿದು ಸ್ಪೀಕರ್ ಗಳ ಮೇಲೆ ಎಸೆದಿರುವುದನ್ನು ಖಂಡನೀಯವಾಗಿದ್ದು 10 ಮಂದಿ ಬಿಜೆಪಿ ಶಾಸಕರನ್ನು ಅಮಾನತುಗೊಳಿಸಲಾಗಿದೆ ಎಂದು ಸ್ಪೀಕರ್ ಖಾದಿರವರು ತಿಳಿಸಿದ್ದಾರೆ

ಹೌದು, ವಿಧಾನಸಭೆ ಕಲಾಪದ ಸಂದರ್ಭ ಅತಿರೇಕದ ವರ್ತನೆ ತೋರಿದ 10 ಮಂದಿ ಬಿಜೆಪಿ ಶಾಸಕರನ್ನು ಇಂದು ಅಮಾನತು ಮಾಡಲಾಗಿದೆ. ಪ್ರಸಕ್ತ ಅಧಿವೇಶನದ ಅವಧಿ ಮುಗಿಯುವ ವರೆಗೂ ಶಾಸಕರನ್ನು ಅಮಾನತು ಮಾಡಿ ಸ್ಪೀಕರ್ ಯುಟಿ ಖಾದರ್ ಆದೇಶಿಸಿದ್ದಾರೆ. ಡಾ. ಅಶ್ವತ್ಥನಾರಾಯಣ, ವೇದವ್ಯಾಸ ಕಾಮತ್, ಅರವಿಂದ ಬೆಲ್ಲದ್​, ಧೀರಜ್ ಮುನಿರಾಜು, ಯಶಪಾಲ್ ಸುವರ್ಣ, ಸುನೀಲ್ ಕುಮಾರ್, ಆರ್. ಅಶೋಕ್, ಉಮಾನಾಥ್ ಕೋಟ್ಯಾನ್, ಅರಗ ಜ್ಞಾನೇಂದ್ರ ಹಾಗೂ ಭರತ್ ಶೆಟ್ಟಿ ಅಮಾನತಾಗಿರುವ ಬಿಜೆಪಿ ಶಾಸಕರಾಗಿದ್ದಾರೆ.

ಗುರುವಾರ ಮತ್ತು ಶುಕ್ರವಾರ 2 ದಿನಗಳ ಕಾಲ ಅಧಿವೇಶನ ಬಾಕಿ ಉಳಿದಿದೆ. ಸದನಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರ ಅಮಾನತು ಮಾಡಲಾಗಿದೆ ಎಂದು ಖಾದರ್ ತಿಳಿಸಿದ್ದಾರೆ. ನಂತರ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿಕೆ ಮಾಡಲಾಗಿದೆ.

ನಂತರ ಅಮಾನತುಗೊಂಡವರನ್ನು ಸದನದಿಂದ ಹೊರಕಳಿಸಲು ಮಾರ್ಷಲ್ಸ್‌ ಒಳಬಂದರು. ಅಷ್ಟರಲ್ಲಿ ಬಿಜೆಪಿಯ ಇತರ ಶಾಸಕರು ಅಮಾನತುಗೊಂಡ ಶಾಸಕರಿಗೆ ತಡೆಗೋಡೆಯಾಗಿ ನಿಂತರು. ಅಮಾನತುಗೊಂಡ ಶಾಸಕರನ್ನು ಮಾರ್ಷಲ್​​ಗಳು ಬಲವಂತವಾಗಿ ಹೊರಗೆ ಕಳುಹಿಸದಂತೆ ತಡೆಯಲು ಬಿಜೆಪಿಯ ಇತರ ಶಾಸಕರು ಪ್ರಯತ್ನಿಸಿದರು. ಆದಾಗ್ಯೂ, ಶಾಸಕರನ್ನು ಬಲವಂತದಿಂದ ಹೊರದಬ್ಬುವಲ್ಲಿ ಮಾರ್ಷಲ್​ಗಳು ಯಶಸ್ವಿಯಾದರು.

ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಕೆಲವು ಬಿಲ್‌ಗಳು ಸೇರಿದಂತೆ ದಾಖಲೆಗಳನ್ನು ಹರಿದು ಉಪಸಭಾಪತಿ ರುದ್ರಪ್ಪ ಲಮಾಣಿ ಅವರ ಮೇಲೆ ಎಸೆದಿದ್ದರು. ಈ ವಿಚಾರವಾಗಿ ಸದನದಲ್ಲಿ ಭಾರಿ ಗದ್ದಲ ಸೃಷ್ಟಿಯಾಗಿತ್ತು. ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್ ಸದಸ್ಯರು ಸ್ಪೀಕರ್​ಗೆ ದೂರು ನೀಡಿದ್ದರು. ಸಣ್ಣ ವಿಚಾರಕ್ಕೆ ಬಿಜೆಪಿಯವರು ಧರಣಿ ಮಾಡುತ್ತಾರೆ. ದಲಿತ ಅಧ್ಯಕ್ಷರ ಮೇಲೆ ಪೇಪರ್ ಎಸೆಯುತ್ತಾರೆ, ಹಲ್ಲೆಗೆ ಮುಂದಾಗುತ್ತಾರೆ. ಬಿಜೆಪಿಯವರು ಕ್ಷಮೆ ಕೇಳಬೇಕು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕ‌ ಶಿವಲಿಂಗೇಗೌಡ ಆಗ್ರಹಿಸಿದ್ದರು.

 

 

Related