ಕೇಬಲ್ ನೆಟ್ ಮೂಲಕ  ಮೀನುಗಾರಿಕೆಗೆ ಸಹಾಯಧನ: ಸಿಎಂ

ಕೇಬಲ್ ನೆಟ್ ಮೂಲಕ  ಮೀನುಗಾರಿಕೆಗೆ ಸಹಾಯಧನ: ಸಿಎಂ

ಬೆಂಗಳೂರು: ಕೇಬಲ್ ನೆಟ್ ಮೂಲಕ  ಮೀನುಗಾರಿಕೆ ಮಾಡಲು 3 ಲಕ್ಷ  ರೂ.ಗಳ ಸಹಾಯಧನವನ್ನು ಪ್ರಸ್ತುತ 300 ಜನರಿಗೆ ನೀಡುತ್ತಿದ್ದು, ಇದನ್ನು 1000 ಮೀನುಗಾರರಿಗೆ ಸಹಾಯಧನ ಹೆಚ್ಚಿಸಲಾಗುವುದೆಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ  ಘೋಷಿಸಿದರು.

ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುತ್ತಿರುವ  2022ನೇ ಸಾಲಿನ ಒಳನಾಡು ಮೀನು ಉತ್ಪಾದಕರ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಉದ್ಘಾಟಿಸಿ, ಮಾತನಾಡಿದರು.

ಸ್ತ್ರೀ  ಸಾಮರ್ಥ್ಯ ಯೋಜನೆಯಡಿ  3 ರಿಂದ 5 ಲಕ್ಷ ನೀಡಲಾಗುತ್ತಿದ್ದು ಒಳನಾಡು ಮೀನುಗಾರಿಕೆ ಕೈಗೊಳ್ಳಲು ಮುಂದೆ ಬರುವ ಸ್ತ್ರೀ ಶಕ್ತಿ ಸಂಘಗಳಿಗೆ ಹಾಗೂ ಸ್ವಾಮಿ ವಿವೇಕಾನಂದರ ಯೋಜನೆಯಡಿ ನೀಡುವ ಸಹಾಯ ಧನವನ್ನು ಬಳಸಿ ಸುಮಾರು 1000  ಸಂಘಗಳಿಗೆ ಮೀನುಗಾರಿಕೆ ಕೈಗೊಳ್ಳಲು ಮುಂದಾಗಬೇಕು ಎಂದರು. ಈಗಾಗಲೇ ಆದೇಶ ನೀಡಿ ಅನುದಾನ ಬಿಡುಗಡೆ ಮಾಡಲಾಗಿದೆ.  ಮೀನುಗಾರಿಕೆಯಲ್ಲಿ ರಾಜ್ಯ ಇನ್ನೂ ಸಾಧನೆ ಮಾಡಬೇಕಿದೆ. ರಫ್ತು ಮಾಡುವಲ್ಲಿ ಆಂಧ್ರಪ್ರದೇಶ ಮುಂದುವರೆದಿದೆ. ಒಂದು ತಂಡವನ್ನು ಆಂಧ್ರಪ್ರದೇಶಕ್ಕೆ ಕರೆದೊಯ್ಯಲು ಸೂಚಿಸಿರುವುದಾಗಿ ತಿಳಿಸಿದರು.

ಈಗಿರುವ ಮೀನುಗಾರಿಕೆ ಚಟುವಟಿಕೆಗಳನ್ನು ವಿಸ್ತರಿಸಿ, ಈಗಿನ ರಫ್ತು ಪ್ರಮಾಣಕ್ಕಿಂತ ಮೂರುಪಟ್ಟು ಹೆಚ್ಚು ಮಾಡಬೇಕೆಂದು ಸೂಚಿಸಿದ್ದೇನೆ. ಇದಕ್ಕೆ ಮುಂದಿನ ಆಯವ್ಯಯದಲ್ಲಿ ಅನುದಾನ ಮೀಸಲಿರಿಸಲಾಗುವುದು ಎಂದರು.

ಕಾಲಮಿತಿಯಲ್ಲಿ ಮೀನುಗಾರರಿಗೆ ಮನೆ ನಿರ್ಮಾಣ

ಮೀನುಗಾರರು ಆರ್ಥಿಕವಾಗಿ ಸಬಲರಾಗಲು 5000 ಮೀನುಗಾರರ ಮನೆಗಳಿಗೆ ಮಂಜೂರಾತಿ ನೀಡಿದೆ. ಕಾಲಮಿತಿಯಲ್ಲೇ ಈ ಮನೆಗಳನ್ನು ಪೂರ್ಣಗೊಳಿಸಬೇಕು. ಜನವರಿಯೊಳಗೆ ಪೂರ್ಣ ಗೊಳಿಸಿದರೆ ಖುದ್ದಾಗಿ ಬಂದು ಮೀನುಗಾರರಿಗೆ ಹಂಚಲಾಗುವುದು ಎಂದರು.

ಮೀನುಗಾರಿಕೆ ಬೃಹತ್ ಉದ್ಯಮ

ಮೀನು ಶತಮಾನಗಳಿಂದ ಮನುಷ್ಯನ ಆಹಾರವಾಗಿದೆ.  ಮೀನು ಸಸ್ಯಾಹಾರಿ. ಮೀನನ್ನು ತಿನ್ನುವವರು ಮಾಂಸಾಹಾರಿಗಳು. ವಿದೇಶಗಳಲ್ಲಿ ಮೀನನ್ನು ಸಸ್ಯಾಹಾರ ಎಂದು ವ್ಯಾಖ್ಯಾನ ಮಾಡುತ್ತಾರೆ. ಮೀನಿಗೆ ಬಹಳಷ್ಟು ಬೆಲೆ ಬಂದಿದೆ. ಮೀನುಗಾರಿಕೆ ಬೃಹತ್ ಉದ್ಯಮವಾಗಿ ಬೆಳೆದಿದೆ. ಮೀನು ಬೆಳೆ ಯುವುದರಿಂದ, ಸಾಕುವುದು, ಆಹಾರ ಉತ್ಪಾದನೆಗೆ ಮಾಡಿ, ಮೀನಿನ ಸಂಗ್ರಹ ಹಾಗೂ ಸಾಗಾಣಿಕೆ ಮಾಡಿ ಬಹಳ ದೊಡ್ಡ ಚಟುವಟಿಕೆ ಗಳು ಮೀನುಗಾರಿಕೆ ಒಳಗೊಂಡಿದೆ. ಇದರಿಂದ ಸಾವಿರಾರು ಜನ ಉದ್ಯೋಗದಲ್ಲಿ ತೊಡಗಲು ಸಾಧ್ಯವಿದೆ. ಮೀನುಗಾರಿಕೆಯಲ್ಲಿ ಸಮುದ್ರ ಮೀನುಗಾರಿಕೆ ಇದೆ. ನಮ್ಮ ಮೀನುಗಾರರು ಸಾಕಷ್ಟು ಸಾಹಸವನ್ನು  ಮಾಡಬೇಕಾಗಿದೆ. ಒಳನಾಡು ಮೀನುಗಾರಿಕೆಯೂ ಅತ್ಯಂತ ಮಹತ್ವ ಪಡೆದುಕೊಂಡಿದೆ. ಮೀನಿನ ಆಹಾರದ ಮಾರಾಟದ ಬೆಲೆ ಬಹಳ ಕಡಿಮೆ ಇದೆ. ಮೀನು ಹಿಡಿದು ಎಷ್ಟು ಅವಧಿಯೊಳಗೆ ಜನರಿಗೆ ಮುಟ್ಟಿಸುತ್ತೇವೆ ಎನ್ನುವುದು ಮುಖ್ಯ. ಈ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದಲ್ಲಿ ಸ್ಥಳೀಯವಾಗಿ  ಮೀನುಗಾರಿಕೆ ಮಾಡಿ ಉತ್ಪಾದನೆ ಮಾಡಿದರೆ, ಅಲ್ಲಿ ತಾಜಾ ಮೀನುಗಳನ್ನು ನೀಡಬಹುದು. ಸಮುದ್ರದ ಮೀನುಗಳಿಗೂ, ಉತ್ಪಾದಿಸುವ ಮೀನುಗಳಿಗೂ ವ್ಯತ್ಯಾಸವಿದೆ. ನೀರು ಮತ್ತು ಅದರ ಒಟ್ಟು ಪ್ರದೇಶ, ಮಣ್ಣಿನ ಸಾರ ಮುಂತಾದ ವಿಚಾರಗಳಿವೆ. ಸಂಶೋಧಕರು ಒಳನಾಡು ಮೀನುಗಾರಿಕೆಯಲ್ಲಿ ದೊಡ್ಡ ಪ್ರಮಾಣದ ಸಂಶೋಧನೆ ಮಾಡುತ್ತಿದ್ದಾರೆ ಎಂದರು.

ಒಳನಾಡು ಮೀನುಗಾರಿಕೆಗೆ ಮಹತ್ವ

ಹೊಸ ತಳಿಗಳನ್ನು ಒಳನಾಡು ಮೀನುಗಾರಿಕೆಯಲ್ಲಿ ಪ್ರಯೋಗ ಮಾಡಿ ಯಶಸ್ವಿಯಾಗಿ ಸಬೇಕು. ಹೊಸ ತಳಿಗಳನ್ನು ತಯಾರು ಮಾಡಿದರೆ ದೊಡ್ಡ ಮಾರುಕಟ್ಟೆ ಲಭ್ಯವಿದೆ.  ಮಾರುಕಟ್ಟೆ ಹಾಗೂ ಉತ್ಪಾದನೆಯ ನಡುವೆ ದೊಡ್ಡ ಅಂತರವಿದೆ.  ಈ ಅಂತರ ತುಂಬಲು ಒಳನಾಡು ಮೀನುಗಾರಿಕೆಗೆ ಮಹತ್ವ ನೀಡಿ ಹೊಸ ತಳಿಗಳನ್ನು ಪ್ರಯೋಗ ಮಾಡಿ ದೊಡ್ಡ ಪ್ರಮಾಣದಲ್ಲಿ ಬೆಳಸಬೇಕು. ಸಮುದ್ರದ ಮೀನುಗಾರಿಕೆಗೆ ಹಲವಾರು ಕಾರ್ಯಕ್ರಮಗಳನ್ನು ನಾವು ರೂಪಿಸಿದ್ದೇವೆ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಪ್ರತಿ ಹೆಕ್ಟೇರ್ ಹೊಸದಾಗಿ ಪ್ರಾರಂಭಿಸಿದರೆ 1 ಲಕ್ಷ ರೂ.ಗಳವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ.

ಕರಾವಳಿಯಲ್ಲಿ ಉತ್ಪಾದನೆ ಯಾಗುವ ಮೀನಿಗೆ ತನ್ನದೇ ಮಾರುಕಟ್ಟೆ ವ್ಯವಸ್ಥೆ ಇದೆ. ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದ ಸಮುದ್ರ ಮಟ್ಟದಲ್ಲಿ ಏರಿಕೆಯಾಗಿ ಮೀನು ಉತ್ಪಾದನೆ ಯಲ್ಲಿ ಬಹಳಷ್ಟು ಏರುಪೇರುಗಳಾಗಿವೆ. ಕರಾವಳಿ ಮೀನುಗಾರರು 8 ಅಥವಾ 10 ನಾಟಿಕಲ್ ಮೈಲುಗಳಲ್ಲಿ ಮೀನುಗಾರಿಕೆ ಮಾಡುತ್ತಾರೆ. ಆದರೆ ಬಹಳ ದೊಡ್ಡ ಉತ್ಕೃಷ್ಟ ಮೀನುಗಳು ಆಳ ಸಮುದ್ರದಲ್ಲಿ ದೊರೆಯುತ್ತವೆ. ನಮ್ಮ ಮೀನುಗಾರರು ದೊಡ್ಡ ಟ್ರಾಲರ್ ಬಳಸಿ ಆಳ ಸಮುದ್ರ ಮೀನುಗಾರಿಕೆ ಮಾಡಬೇಕೆಂದು ಈ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರೋತ್ಸಾಹದಿಂದ  ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆಯಡಿ ನಾವು 100 ಹೊಸ ಆಳ ಸಮುದ್ರ ಬೋಟುಗಳನ್ನು  ಒದಗಿಸುತ್ತಿದ್ದು, 40 % ಸಹಾಯಧನವಿದ್ದು ಅತಿ ಸುಲಭ ದರದಲ್ಲಿ ಸಾಲದ ವ್ಯವಸ್ಥೆ ಮಾಡಲಾಗಿದೆ. 100 ಬೋಟುಗಳನ್ನು ನೀಡಿದರೆ, ಮುಂದಿನ ವರ್ಷ 300 ಬೋಟುಗಳಿಗೆ ವಿಸ್ತರಣೆ ಮಾಡುವ ಉದ್ದೇಶವಿದೆ. ಮೀನುಗಾರರ ಸಂಘಗಳು ಕೂಡ ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿ ಹೆಚ್ಚಿನ ಉತ್ಪಾದನೆ ಮಾಡಬೇಕೆಂಬ ಉದ್ದೇಶ ನಮ್ಮದು ಎಂದರು.

5600  ಗ್ರಾಮ ಪಂಚಾಯಿತಿಯಲ್ಲಿ  5600 ಕೆರೆಗಳಲ್ಲಿ ಮೀನು ಅಭಿವೃದ್ಧಿಗೆ ಅನುದಾನ

ಕರಾವಳಿ ಪಕ್ಕದಲ್ಲಿ ಕಡಲ ಕೊರೆತವಾಗಿ ಹೂಳು ತುಂಬಿ ತೊಂದರೆಯಾಗುತ್ತಿರುವುದರಿಂದ ಎಂಟು ಮೀನುಗಾರಿಕೆ ಬಂದರುಗಳಿಗೆ ವಿಶೇಷ ಅನುದಾನ ನೀಡಿ ಹೂಳು ತೆಗೆಯಲು ಈ ವರ್ಷ  ಅನುಮೋದನೆ ನೀಡಲಾಗಿದೆ.

ಮೀನುಗಾರರಿಗೆ ಡೀಸಲ್ ಹಾಗೂ ಸೀಮೆ ಎಣ್ಣೆ ಸಹಾಯಧನವನ್ನು ಹೆಚ್ಚಿಸಲಾಗಿದೆ. ಪ್ರವಾಹ ಬಂದ ಸಂದರ್ಭದಲ್ಲಿ ಮೀನುಗಾರರ ಹಡುಗುಗಳು ಹಾಳಾಗುತ್ತವೆ. ಅದಕ್ಕೆ ಎನ್.ಡಿ.ಆರ್.ಎಫ್ ನಿಯಮಾವಳಿ ಪ್ರಕಾರ ಅನುದಾನ  ನೀಡಲು ಅವಕಾಶವಿಲ್ಲ. ರಾಜ್ಯ ಸರ್ಕಾರ ದಿಂದಲೇ  ಮೀನುಗಾರರ ದೋಣಿಗಳಿಗೆ ಸಹಾಯಧನ ನೀಡಲು ತೀರ್ಮಾನಿಸಲಾಗಿದೆ. ಒಳನಾಡು ಮೀನುಗಾರಿಕೆಗೂ ಪ್ರೋತ್ಸಾಹ ನೀಡಲು 5600  ಗ್ರಾಮ ಪಂಚಾಯಿತಿಯಲ್ಲಿ  5600 ಕೆರೆಗಳಲ್ಲಿ ಮೀನು ಅಭಿವೃದ್ಧಿಗೆ ಅನುದಾನ ನೀಡಿದೆ. ಆಲಮಟ್ಟಿ, ಕೆ.ಆರ್.ಎಸ್ ಹಿನ್ನೀರಿನಲ್ಲಿ ವ್ಯವಸ್ಥಿತ ರೀತಿಯಲ್ಲಿ ಮೀನುಗಾರಿಕೆ ಆಗುತ್ತಿಲ್ಲ.  ಕೆಲವರೇ ಸ್ವಾಮ್ಯತೆ ಮಾಡಿಕೊಂಡಿದ್ದು, ಇದನ್ನು ತಪ್ಪಿಸಿ ಎಲ್ಲರಿಗೂ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.

ಎಲ್ಲ ಬಿಬಿಎಂಪಿ ವಾರ್ಡ್ ಗಳಲ್ಲಿ ಮೀನು ಆಹಾರ ಮಳಿಗೆ ಪ್ರಾರಂಭ :

ಬಿಬಿಎಂಪಿ ವಲಯಗಳಲ್ಲಿ ಮೀನಿನ ಆಹಾರಕ್ಕೆ ಬಹಳ ಬೇಡಿಕೆಯಿದೆ. ಪ್ರತಿಯೊಂದು ವಾರ್ಡಿನಲ್ಲಿ 1500-2000   ಚ.ಮೀ.   ವಿಸ್ತೀರ್ಣದಲ್ಲಿ ಮೀನಿನ ಆಹಾರವನ್ನು ಒದಗಿಸುವ ಮಳಿಗೆಯನ್ನು ಪ್ರಾರಂಭಿಸುವ ಯೋಜನೆ ಇದೆ. ಬೆಂಗಳೂರಿನ 243 ವಾರ್ಡ್ ಗಳಲ್ಲಿಯೂ ಇದಕ್ಕೆ ಸ್ಥಳಾವಕಾಶ ಮಾಡಿಕೊಡಲಾಗುವುದು. ಖಾಸಗಿ ವಲಯದವರು ಇಲ್ಲಿ ಮಳಿಗೆಯನ್ನು ತೆರೆಯಬಹುದು.  ಬೆಂಗಳೂರು ನಗರದಲ್ಲಿ ಈ ಯೋಜನೆ ಸಫಲವಾದರೆ, ರಾಜ್ಯದ ಎಲ್ಲ ಮಹಾನಗರಪಾಲಿಕೆ ವ್ಯಾಪ್ತಿಗೆ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದರು.

ವರ್ಷ 1 ಲಕ್ಷ ಮೀನುಗಾರರ ಮಕ್ಕಳಿಗೆ ರೈತವಿದ್ಯಾನಿಧಿ ನೀಡುವ ಗುರಿ :

ರೈತಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು 14 ಲಕ್ಷ ಜನ ರೈತಮಕ್ಕಳಿಗೆ ವಿದ್ಯಾನಿಧಿ ಕೊಡುತ್ತಿದ್ದೇನೆ. ರೈತಕೂಲಿಕಾರರು, ಮೀನುಗಾರರು, ನೇಕಾರರು, ಕಾರ್ಮಿಕರು, ಆಟೋ ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳಿಗೂ ವಿದ್ಯಾನಿದಿ ಯೋಜನೆ ವಿಸ್ತರಿಸಲಾಗಿದೆ. ಈಗಾಗಲೇ 1 ಲಕ್ಷ ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು  ಇದೇ ವರ್ಷ ವಿತರಿಸುವ ಗುರಿಯನ್ನು ಹೊಂದಿದ್ದು,  ಇದಕ್ಕಾಗಿ 50  ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು ಎಂದರು.

ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಸರ್ಕಾರದ ಸಹಕಾರ :

ಮೀನುಗಾರಿಕೆ, ಮೀನು ಆಹಾರ ಉತ್ಪಾದನೆ, ಮಾರುಕಟ್ಟೆ ವ್ಯವಸ್ಥೆ, ರಫ್ತು, ಸ್ಥಳೀಯ ಮಾರುಕಟ್ಟೆ, ಹೀಗೆ  ಮೀನುಗಾರಿಕೆಯ ವಿವಿಧ ವಲಯಗಳಿಗೆ ಈಗ ಬಹಳ ಅವಕಾಶಗಳಿವೆ. ಖಾಸಗಿ ವಲಯದವರು ಆಸಕ್ತಿವಹಿಸಿ ಬಂದರೆ, ಮಾರುಕಟ್ಟೆ ವ್ಯವಸ್ಥೆ, ಸಾಗಾಣಿಕೆ ಸೇರಿದಂತೆ ಎಲ್ಲ ರೀತಿಯ ಸಹಕಾರವನ್ನು ನೀಡಲು  ಸರ್ಕಾರ ಸಿದ್ಧವಿದೆ. ಮೀನಿನ ಸಂಸ್ಕರಣೆ, ಮೀನು ಆಹಾರ ಉತ್ಪಾದನೆಗೆ ಸರ್ಕಾರ ಸಹಕಾರ ನೀಡುತ್ತದೆ. ಮೀನುಗಾರಿಕೆ ವಲಯದಲ್ಲಿ ಖಾಸಗಿ ವಲಯದ ಆಸಕ್ತಿ, ಹೆಚ್ಚಿನ ಹೂಡಿಕೆ,ಉತ್ಪಾದನೆ, ಮಾರುಕಟ್ಟೆ ಅವಕಾಶಗಳು ಬರಬೇಕೆಂಬ ಉದ್ದೇಶದಿಂದ ಇಂದಿನ ಸಮಾವೇಶ ಆಯೋಜಿಸಲಾಗಿದೆ ಎಂದರು.

ಜನರ ದುಡಿಮೆಯೇ ರಾಜ್ಯದ ಆರ್ಥಿಕತೆ:

ಮೀನುಗಾರಿಕೆಯ ವಹಿವಾಟನ್ನು ಎಂಟು ಲಕ್ಷ ಕೋಟಿರೂ.ಗಳಿಗೆ ಹೆಚ್ಚಿಸುವ ಗುರಿಇದ್ದು, ಇದು ರಾಜ್ಯದ ಆಂತರಿಕ ಜಿಡಿಪಿಯನ್ನು ಹೆಚ್ಚಿಸುತ್ತದೆ. ಪ್ರಧಾನಿ ಮೋದಿಯವರ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸಿಗೆ ರಾಜ್ಯದಲ್ಲಿನ ಕೃಷಿ,ಮೀನುಗಾರಿಕೆ, ಕುರಿ ಸಾಕಾಣಿಕೆ ಇವೆಲ್ಲವೂ ಕೊಡುಗೆ ನೀಡಲಿವೆ. ಕೃಷಿಯಲ್ಲಿ ಶೇ. 1 ರ ಅಭಿವೃದ್ಧಯಾದರೆ, ಶೇ.4 ರಷ್ಟು ಉತ್ಪಾದನಾ ಹಾಗೂ ಶೇ.10 ರಷ್ಟು ಅಭಿವೃದ್ಧಿ ಸೇವಾ ವಲಯದಲ್ಲಿ ಆಗುತ್ತದೆ. ಜನರ ದುಡಿಮೆಯೇ ರಾಜ್ಯದ ಆರ್ಥಿಕತೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಮೀನುಗಾರಿಕೆ ಹಾಗೂ ಬಂದರು ಸಚಿವರಾದ   ಎಸ್. ಅಂಗಾರ, ಸಚಿವರಾದ ಡಾ. ಸಿ‌. ಎನ್. ಅಶ್ವತ್ಥ್ ನಾರಾಯಣ್, ಬೈರತಿ ಬಸವರಾಜ, ಕೋಟ ಶ್ರೀನಿವಾಸ ಪೂಜಾರಿ, ಬಿ.ಸಿ. ನಾಗೇಶ, ಶಾಸಕ ಸಂಜೀವ ಮಟಂದೂರು, ಫ್ರೀಡಂ ಆ್ಯಪ್ ಸಂಸ್ಥಾಪಕ ಸಿ.ಎಸ್. ಸುಧೀರ್ , ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ. ಫಹೀಮ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Related