ಇಂಧನ ಇಲಾಖೆಯ ಆರ್ಥಿಕ ಸದೃಢತೆಗೆ ಸುಧಾರಣಾ ಕ್ರಮ – ಸಿಎಂ

ಇಂಧನ ಇಲಾಖೆಯ ಆರ್ಥಿಕ ಸದೃಢತೆಗೆ ಸುಧಾರಣಾ ಕ್ರಮ – ಸಿಎಂ

ಬೆಂಗಳೂರು: ವಿದ್ಯುತ್ ಉತ್ಪಾದನೆ, ಹಂಚಿಕೆ, ವಿತರಣೆಯಲ್ಲಿ ದಕ್ಷತೆ, ನಷ್ಟ ತಡೆಯಲು ಹಾಗೂ  ಇಂಧನ ಇಲಾಖೆಯ ಆರ್ಥಿಕ  ಸದೃಢತೆಗೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆವಿಕಂ ವ್ಯಾಪ್ತಿಯ ಬೆಂಗಳೂರು ನಗರಮತ್ತು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರಮತ್ತು ದಾವಣಗೆರೆ ಜಿಲ್ಲೆ, ಕಚೇರಿ ಕಟ್ಟಡಗಳ  ಉದ್ಘಾಟನೆ ಮತ್ತು ಶಂಕುಸ್ಥಾಪನೆ ನರವೇರಿಸಿ ಅವರು ಇಂದು ಮಾತನಾಡಿದರು.

ಇಂಧನ ಇಲಾಖೆಯಲ್ಲಿ ಸಬ್ಸಿಡಿ ಹಾಗೂ ಸಾರಿಗೆ ಇಲಾಖೆಗೆ ನಷ್ಟವಾಗಿದ್ದು, ಇವೆರಡೂ ಸಂಸ್ಥೆಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಿದ್ದು, ವರದಿಯಂತೆ ಸುಧಾರಣಾ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.

ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಸೇವೆ

ಸುಮಾರು 16 ಸಾವಿರ ಕೋಟಿ ರೂ.ಗಳ ವಿದ್ಯುತ್ ಸಬ್ಸಿಡಿಯನ್ನು ನೀಡಿದ್ದರೂ  ಎಸ್ಕಾಂಗಳು ಸಾಲದಲ್ಲಿದೆ. ಕಳೆದ  ಒಂದೂವರೆ ವರ್ಷದಲ್ಲಿ ಇಂಧನ ಕ್ಷೇತ್ರಕ್ಕೆ 9 ಸಾವಿರ ರೂ.ಗಳನ್ನು ನೀಡಲಾಗಿದೆ. ಎಸ್ಕಾಮ್ ಹಾಗೂ ಕರ್ನಾಟಕ ವಿದ್ಯುತ್ ನಿಗಮಕ್ಕೆ ವಿಶೇಷ ಅನುದಾನ ನೀಡಲಾಗಿದೆ. ಬೇಸಿಗೆಯಲ್ಲಿ ವಿದ್ಯುಶ್ಚಕ್ತಿಯ ನಿರ್ವಹಣೆ ಹಾಗೂ ಸಿದ್ಧತೆ, ವಿದ್ಯುತ್ ಉತ್ಪಾದನೆ ಹಾಗೂ ಸಂಗ್ರಹಣೆ ಮಾಡುವುದು ಹಾಗೂ ಹೆಚ್ಚುವರಿ ವಿದ್ಯುತ್ ನ್ನು ಮಾರಾಟ ಮಾಡಿ 2500 ಕೋಟಿ ಲಾಭಾಂಶವನ್ನು ಪಡೆಯಲಾಗಿದೆ. ರೈತ, ಉದ್ಯಮಿ, ಬೀದಿಬದಿ ವ್ಯಾಪಾರಿ ಸೇರಿದಂತೆ ವಿದ್ಯುಚ್ಛಕ್ತಿಯ ಎಲ್ಲ ವರ್ಗದ ಗ್ರಾಹಕರಿಗೆ ಸಮರ್ಪಕವಾದ ಸೇವೆಯನ್ನು ನೀಡಲಾಗುತ್ತಿದೆ. ಬೇಸಿಗೆಯ ಕಾಲದಲ್ಲಿ  ಹೆಚ್ಚಿನ ಸಂಖ್ಯೆಯ ಟ್ರಾನ್ಸಫಾರ್ಮರ್ ಗಳನ್ನು ಸಿದ್ಧಪಡಿಸಿಕೊಳ್ಳಲಾಗುತ್ತಿದೆ ಎಂದರು.

ನಷ್ಟದ ವೈಜ್ಞಾನಿಕ ಲೆಕ್ಕಚಾರ ಅಗತ್ಯ

ಪವರ್ ನಲ್ಲಿ ಪವರ್ ಪೊಲಿಟಿಕ್ಸ್ ನಡೆಯುತ್ತಿದೆ. ವಿದೇಶಿ ಕಲ್ಲಿದ್ದಲು ತರಿಸಿ ಅದನ್ನು ಸ್ಥಳೀಯ ಕಲ್ಲಿದ್ದಲು ಜೊತೆಗೆ ಬೆರೆಸಿ ಬಳಸಲು ಸಾಧ್ಯವಾಗದೆ ನಷ್ಟ ಅನುಭವಿಸಬೇಕಾಯಿತು. ಪೂರಕವಾದ ಇಂಧನ ನೀತಿಯಿರದ ಕಾರಣ, ವಿದ್ಯುತ್ಛಕ್ತಿ ಇಲಾಖೆಯನ್ನು ಪೊಲಿಟಿಕಲ್ ಪವರ್ ಬಳಿಸಿ ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿ, ವಿದ್ಯುತ್ ಕ್ಷೇತ್ರದಲ್ಲಿ ನಷ್ಟ ಅನುಭವಿಸುವಂತಾಯಿತು. ಈ ರೀತಿಯ ನಷ್ಟವಾಗಬಾರದು. ವಿದ್ಯುತ್ ನಲ್ಲಿ ಆಗುತ್ತಿರುವ ನಷ್ಟವನ್ನು ಕಡಿತಗೊಳಿಸಬೇಕು. ಇಂಧನ ಕ್ಷೇತ್ರದಲ್ಲಿ ಆಗುತ್ತಿರುವ ನಷ್ಟವನ್ನು ವೈಜ್ಞಾನಿಕವಾಗಿ ಲೆಕ್ಕಹಾಕಬೇಕಿದೆ. ಈ ನಿಟ್ಟಿನಲ್ಲಿ ಸುಧಾರಣೆಗಳಾಗಬೇಕಿದೆ ಎಂದರು.

ಬಡಜನರಿಗೆ 40 ಯೂನಿಟ್ ವರೆಗೆ ಉಚಿತ ವಿದ್ಯುತ್

ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ ಯೋಜನೆಯಡಿ ಬಡಜನರಿಗೆ 40 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಗೃಹೋಪಯೋಗದಲ್ಲಿ  ಸಾಧಾರಣವಾಗಿ ಗರಿಷ್ಟ 60-70 ಯೂನಿಟ್ ಖರ್ಚಾಗುತ್ತದೆ. ಆದರೆ, ಸುಮ್ಮನೆ 200 ಯುನಿಟ್ ಉಚಿತ ಕೊಡುತ್ತೇವೆ ಎಂದು ಹೇಳುವುದರಲ್ಲಿ ಏನು ಅರ್ಥ ಇದೆ. ಆದ್ದರಿಂದ ಇಂಧನ ಕ್ಷೇತ್ರದಲ್ಲಿ ಪವರ್ ಪಾಲಿಟಿಕ್ಸ್ ಮಾಡಬಾರದು. ಇದು ಜನರಿಗೆ ಮೋಸ ಮಾಡುವ ತಂತ್ರ ಎಂದರು.

ಕೆಪಿಟಿಸಿಲ್ ಗೆ   3000 ಕೋಟಿ ರೂ.

ಕೇಂದ್ರ ಸರ್ಕಾರ ರೈತರಿಗೆ ಸೋಲಾರ ಪಂಪ್ ಸೆಟ್ ಗಳಿಗೆ ಸಹಾಯ ನೀಡುತ್ತಿದೆ. ಈ ವರ್ಷ ಬಜೆಟ್ ನಲ್ಲಿ 3000 ಕೋಟಿ ರೂ.  ಸುಗಮ ವಿದ್ಯುತ್ ರವಾನೆಗೆ ಕೆಪಿಟಿಸಿಲ್ ಗೆ  ನೀಡುತ್ಗಿದ್ದೆವೆ. ಈ ಇಲಾಖೆಯಿಂದ ಜನ್ನಷ್ಟು ಉತ್ತಮ  ಹಾಗೂ ದಕ್ಷತೆಯಿಂದ ಕೆಲಸ ಮಾಡಿ, ಕೆಪಿಟಿಸಿಎಲ್ ಉದ್ಯೋಗಿಗಳ ವೇತನ ಪರಿಷ್ಕರಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ‌‌.‌ ಸೆಂಟರ್ ಆಫ್ ಎಕ್ಸಲೆನ್ಸ್‌ ಕೆಂದ್ರಗಳ ಮೂಲಕ ಉತ್ತಮ ಕೆಲಸಗಳು ಆಗಲಿ.ತಂತ್ರಜ್ಞಾನದ ಜೊತೆಗೆ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಬೇಕಿದೆ ಎಂದರು.

ಇಂಧನದ ಬೇಡಿಕೆ ನಿರಂತರ ಹೆಚ್ಚುತ್ತದೆ

ಇಂಧನ ಇಲಾಖೆಯಲ್ಲಿ ಬಹಳ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಿರಿ,  ಇಂಧನ ಇಲಾಖೆಯಲ್ಲಿ ಲೈನ್ ಮನ್ ಅತ್ಯಂತ  ಶಕ್ತಿಶಾಲಿ ವ್ಯಕ್ತಿ  ಎಂದು ಅಭಿಪ್ರಾಯಪಟ್ಟ ಸಿಎಂ,  ಏಷ್ಯಾದಲ್ಲಿ ಕರ್ನಾಟಕದಲ್ಲಿ ಮೊದಲು ವಿದ್ಯುತ್ ಉತ್ಪಾದನೆ ಆರಂಭವಾಯಿತು. ಬೇಡಿಕೆ ಹೆಚ್ಚಾಗಿ ಜಲ ವಿದ್ಯುತ್ ನಂತರ ಥರ್ಮಲ್ ವಿಧ್ಯುತ್ ಈಗ ಪರಿಸರ ಸ್ನೇಹಿ ನವೀಕರಿಸಬಹುದಾದ ಇಂಧನದಲ್ಲಿ ಪವನ ಮತ್ತು ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಇದರಲ್ಲಿಯೂ ನಾವು ಮುಂಚೂಣಿಯಲ್ಲಿದ್ದೇವೆ.   ಕರ್ನಾಟಕ ಅಭಿವೃದ್ಧಿಶೀಲ ರಾಜ್ಯವಾಗಿದ್ದು,  ಇಂಧನದ ಬೇಡಿಕೆ ನಿರಂತರ ವಾಗಿ ಹೆಚ್ಚಾಗುತ್ತದೆ. ಉತ್ಪಾದನೆಯನ್ನು ಹೆಚ್ಚಿಸಿಕೊಂಡು ಹೋದರೇ ಮಾತ್ರ ಬೇಡಿಕೆಯನ್ನು ಸರಿದೂಗಿಸಬಹುದು. 30 ಸಾವಿರ  ಮೆ.ವ್ಯಾ ಉತ್ಪಾದನೆ ಮಾಡಹುದು.  ಆದರೆ, ವಿದ್ಯುತ್ ಉತ್ಪಾದನೆ ಹೆಚ್ಚಾದ ಮೇಲೆ ಅದನ್ನು ಸಂಗ್ರಹಿಸಿಟ್ಟುಕೊಳ್ಳುವುದು ಸಾಧ್ಯವಿಲ್ಲ.  ಸಾಂಪ್ರದಾಯಿಕ ವಿದ್ಯುತ್ ಉತ್ಪಾದನೆ ಮೇಲೆ ಅವಲಂಬಿಸಬೇಕಾಗಿದೆ.  ಬೇಡಿಕೆ, ಸರಬರಾಜು, ವಿತರಣೆ ಎಲ್ಲವನ್ನೂ ಕೂಡ  ಸಮತೋಲನ ಮಾಡಲು ವಿಶೇಷ ನಿರ್ವಹಣಾ ಕೌಶಲ್ಯ ಅಗತ್ಯವಿದೆ ಎಂದರು.

ಸ್ಕಾಡಾ-2 ಗೆ ಅನುಮತಿ

ಸ್ಕಾಡಾವನ್ನು ಅತ್ಯಂತ‌ ಯಶಸ್ವಿಯಾಗಿ ನಿರ್ವಹಣೆ ಮಾಡಿದ ಇಲಾಖೆ ಇಂಧನ ಇಲಾಖೆ. ಸ್ಕಾಡಾ ಇದ್ದದ್ದರಿಂದ ಸುಮಾರು 200 ಕಿಮೀ ಜಾಲ ದ್ದು, ಸ್ಕಾಡಾ-2 ಗೆ ಅನುಮತಿ ನೀಡಲಾಗಿದೆ. ಇದನ್ನು ಮೇಲ್ದರ್ಜೇಗೇರಿಸುವುದರಿಂದ ದಕ್ಷತೆ ಹೆಚ್ಚಾಗಲಿದೆ. ಇದರ ಜೊತೆಗೆ ನವೀಕರಿಸಬಹುದಾದ ಇಂಧನವನ್ನು ಹೆಚ್ಚು ಬಳಸಿ ಪಂಪ್ ಸ್ಟೋರೇಜ್ ಸಾಮರ್ಥ್ಯ ಹೆಚ್ಚಿಸಲು ಕ್ರಮವಹಿಸಿದೆ. ಶರಾವತಿ ಯೋಜನೆಯನ್ನು ಪಂಪ್ ಸ್ಟೋರೇಜ್ ಅಡಿ ಕೈಗೊಳ್ಳಲಾಗಿದೆ.   ನವೀಕರಿಸಬಹುದಾದ ಇಂಧನ ಬಳಕೆಗೆ ಪಂಪ್ ಸ್ಟೋರೇಜ್ ಅಗತ್ಯ  ವಿದ್ಯುತ್ ಸ್ಟೋರೇಜ್ ಸಲುವಾಗಿ ಸೋಲಾರ್ ಬ್ಯಾಟರಿಗಳ ತಯಾರಿಕೆಗೆ ಆದ್ಯತೆ  ನೀಡುತ್ತಿದ್ದೇವೆ. ಒಂದು ಕಡೆ ವಿದ್ಯುತ್ ಉತ್ಪಾದನೆ ಹಾಗೂ ಅದರ ಸಮರ್ಪಕ ವಿತರಣೆ ಹಾಗೂ ಸದಾ ಮೇಲ್ದರ್ಜೇರಿಸುತ್ತಿರುವುದು. ಮತ್ತೊಂದೆಡೆ ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಮಾತ್ರ  ನಮ್ಮ ಭವಿಷ್ಯದ ಇಂಧನ ಉತ್ತಮವಾಗಲಿದೆ ಎಂದರು.

ಇಂಧನ ಸಚಿವ ಸುನೀಲ್ ಕುಮಾರ್,  ಶಾಸಕ ಹಾಗೂ ವಿಧಾನಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕ ಸತೀಶ್ ರೆಡ್ಡಿ, ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್,   ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ್ ಬೀಳಗಿ ಉಪಸ್ಥಿತರಿದ್ದರು.

Related