ಬೆಂಗಳೂರು: ಕರ್ನಾಟಕದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣವು ಮೇಲ್ನೋಟಕ್ಕೆ ರಾಜಕೀಯ ಪಿತೂರಿಯಂತೆ ಗೋಚರಿಸುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ನೋಡಿದಂತೆ ರಮೇಶ್ ಜಾರಕಿಹೊಳಿ ಮಹಾನ್ ದೈವಭಕ್ತರು. ಸಮಾಜಕ್ಕೆ ಯಾವುದೇ ರೀತಿ ಅಂಜುವ ವ್ಯಕ್ತಿಯಲ್ಲ. ಸುಖಾಸುಮ್ಮನೆ ಊಹಾಪೋಹಗಳ ಮೇಲೆ ನಾನು ಮಾತನಾಡುವುದಕ್ಕೆ ಬಯಸುವುದಿಲ್ಲ ಎಂದರು.
“ನಾನು ವೈಯಕ್ತಿಕವಾಗಿ ಹೇಳುವುದಾದರೆ ಸಚಿವ ರಮೇಶ್ ಜಾರಕಿಹೊಳಿಯವರು ಇಂಥ ಕೆಲಸವನ್ನು ಮಾಡಿರುವುದಕ್ಕೆ ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ನಾನು ಅವರಿಗೆ ನೈತಿಕವಾಗಿ ಬೆಂಬಲ ನೀಡಬೇಕಿದೆ. ಇದರ ಹಿಂದೆ ವ್ಯವಸ್ಥಿತವಾದ ರಾಜಕೀಯ ಪಿತೂರಿ ಅಡಗಿದೆ ಎಂದು ಸಚಿವ ಸಿ.ಪಿ. ಯೋಗೇಶ್ವರ್ ಆರೋಪಿಸಿದ್ದಾರೆ.
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣದಲ್ಲಿ ಸ್ವತಃ ಸಚಿವರೇ ತಾವೇನೂ ತಪ್ಪು ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಹೇಳಿಕೆ ಮತ್ತು ತನಿಖೆಯ ನಂತರದಲ್ಲಿ ಪ್ರಕರಣದ ಸತ್ಯಾಸತ್ಯತೆ ಹೊರ ಬರಲಿದೆ. ಇಡೀ ಪ್ರಕರಣದ ಕುರಿತು ವಿಚಾರಣೆ ಪೂರ್ಣಗೊಳ್ಳುವವರೆಗೂ ಕಾದು ನೋಡೋಣ ಎಂದು ಯೋಗೇಶ್ವರ್ ಹೇಳಿದ್ದಾರೆ.