ಭೂಸುಧಾರಣೆ ಕಾಯಿದೆ ತಿದ್ದುಪಡಿ: ಯಾರಿಗೂ ನಷ್ಟವಾಗಿಲ್ಲ

ಭೂಸುಧಾರಣೆ ಕಾಯಿದೆ ತಿದ್ದುಪಡಿ: ಯಾರಿಗೂ ನಷ್ಟವಾಗಿಲ್ಲ

ಕೊಪ್ಪಳ: ರೈತರಿಗಾಗಿ ಹೋರಾಟ ಮಾಡಿರುವ ತಮಗೆ ರೈತರ ಕಷ್ಟನಷ್ಟಗಳ ಅರಿವಿದೆ. ರೈತರಿಗಾಗಿ ತಾವು ಜೈಲಿಗೂ ಸಹ ಹೋಗಿಬಂದಿದ್ದು, ಇದನ್ನು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಚೆನ್ನಾಗಿ ಅರಿತುಕೊಳ್ಳಬೇಕೆಂದು ಕೃಷಿ ಸಚಿವರಾಗಿರುವ ಬಿ.ಸಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಉಸ್ತುವಾರಿ ಜಿಲ್ಲೆ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಭೂಸುಧಾರಣೆ ಕಾಯಿದೆ ತಿದ್ದುಪಡಿಯಿಂದ ಯಾರಿಗೂ ನಷ್ಟವಾಗಿಲ್ಲ. ಮೆಡಿಕಲ್ ಓದಿದವರು ಸರ್ಕಾರಿ ನೌಕರಿ ಸಿಗದಿದ್ದಾಗ ಆಸ್ಪತ್ರೆ ಕ್ಲಿನಿಕ್ ತೆರೆಯಲು ಅವಕಾಶವಿದೆ. ಅದರಂತೆ ಕೃಷಿಕರ ಮಕ್ಕಳಲ್ಲದವರು ಕೃಷಿ ಪದವಿ ಪಡೆದು ಭೂಮಿ ಖರೀದಿಸಿ ಕೃಷಿ ಮಾಡಲು ಕಾಯಿದೆ ಅನುಕೂಲ ಕಲ್ಪಿಸಿದೆ. ಕಾಯಿದೆ ತಿದ್ದುಪಡಿಯಿಂದ ಯಾರಾದರೂ ಕೃಷಿಕರಾಗಬಹುದು. ಕೃಷಿಯತ್ತ ಆಕರ್ಷಣೆ ಹೆಚ್ಚಾಗಿ ಕೃಷಿಕ್ಷೇತ್ರ ಅಭಿವೃದ್ಧಿಯಾಗಲು ಸಹಕಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದರು.

ಕೋವಿಡ್ ಕಾರಣ ಐಸಿಎಆರ್ (ಭಾರತೀಯ ಕೃಷಿ ಸಂಶೋಧನಾ ಮಂಡಳಿ) ನಿಯಮದಂತೆ, ರಾಜ್ಯದಲ್ಲಿ ಕೃಷಿ ಪದವಿಯ ದಾಖಲಾತಿಗೆ ಪರೀಕ್ಷೆಯ ಬದಲಾಗಿ ಸಿಇಟಿ ರ್ಯಾಂಕಿಂಗ್ ಆಧಾರದ ಮೇಲೆ ಕೃಷಿಕರ ಮಕ್ಕಳು ಹಾಗೂ ಕೃಷಿ ಕಾರ್ಮಿಕರ ಕೋಟಾದಡಿ ಅರ್ಹ ವಿದ್ಯಾರ್ಥಿಗಳಿಗೆ ಸೀಟು ಹಂಚಲಾಗುತ್ತಿದೆ.

ಕೋವಿಡ್ ಪರಿಸ್ಥಿತಿಯಲ್ಲಿ ಸರ್ಕಾರವು ರೈತರ ಆರೋಗ್ಯ ಹಾಗೂ ಹಿತರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿದ್ದು, ಸಾವಿರಾರು ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಗಳಿಗೆ ಸ್ವತಃ ಹಾಜರಾಗಬೇಕಾಗುತ್ತದೆ. ಕೃಷಿಕರ ಕೋಟಾದ ಅಡಿಯಲ್ಲಿ 40% ಸೀಟುಗಳು ಕೃಷಿಕರ ಮಕ್ಕಳಿಗೇ ಮೀಸಲಾಗಿದೆ. ಕೃಷಿಕರ ಮಕ್ಕಳಿಗೆ ಯಾವುದೇ ರೀತಿಯ ಅನ್ಯಾಯವಾಗುವುದಿಲ್ಲ ಎಂದು ಸಚಿವರು ಖಾತ್ರಿಪಡಿಸಿದರು.

Related