ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷ ಬಹುಮತದಲ್ಲಿ ಗೆದ್ದು ತನ್ನ ಅಧಿಕಾರ ಗದ್ದುಗೆಯನ್ನು ಏರಲು ಸಜ್ಜಾಗಿದೆ.
ಇನ್ನು ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆಜಿಎಫ್ ಬಾಬು ಅವರು ಚುನಾವಣೆ ಸಂದರ್ಭದಲ್ಲಿ ನೀಡಿದ ಹಣವನ್ನು ವಾಪಸ್ ಕೊಡುವಂತೆ ಹೇಳಿದ್ದಾರೆ.
ಕಾಂಗ್ರೆಸ್ನಿಂದ ಉಚ್ಛಾಟನೆಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಕೆಜಿಎಫ್ ಬಾಬು ಅಲಿಯಾಸ್ ಯೂಸೂಪ್ ಷರೀಫ್ ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದಾರೆ.
ಚುನಾವಣೆಯಲ್ಲಿ ಸೋತ ಬಳಿಕ ಉರ್ದು ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿರುವ ಕೆಜಿಎಫ್ ಬಾಬು ತಮ್ಮಿಂದ ಪಡೆದ ಚೆಕ್ಗಳನ್ನು ಹಿಂದಿರುಗಿಸಬೇಕು ಎಂದು ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ, ಚುನಾವಣೆ ಸಂದರ್ಭದಲ್ಲಿ ಚಿಕ್ಕಪೇಟೆ ಕ್ಷೇತ್ರದ 64 ಮಸೀದಿಗಳ ಸಮಿತಿಗಳಿಗೆ 17.30 ಕೋಟಿ ರೂಪಾಯಿ ಮೌಲ್ಯದ ಚೆಕ್ ವಿತರಣೆ ಮಾಡಿದ್ದರು.
ಜಾಹೀರಾತಿನಲ್ಲಿ ದಾರೂಲ್ ಉಲೂಮ್ ಫತ್ವಾ ಉಲ್ಲೇಖಿಸಿರುವ ಕೆಜಿಎಫ್ ಬಾಬು ಚುನಾವಣೆ ಸಮಯದಲ್ಲಿ ರಾಜಕಾರಣಿಗಳಿಂದ ಪಡೆದ ಹಣ ಹರಾಮ್ ಆಗಿರುತ್ತದೆ ಎಂದು ಹೇಳಿದ್ದಾರೆ.
ಹಲವು ಮಸೀದಿಗಳ ಹೆಸರು ಉಲ್ಲೇಖ
ಹರಾಮ್ ಹಣವನ್ನು ಬಳಸದೇ ಆದಷ್ಟು ಬೇಗ ತಮಗೆ ಹಿಂದಿರುಗಿಸಿ. ಕೃಷ್ಣಪ್ಪ ಗಾರ್ಡನ್ ಮಸೀದಿ-ಇ-ಹುಸ್ನಾ, ಸಿದ್ದಾಪುರ ಟ್ಯಾಂಕ್ ಗಾರ್ಡನ್ನಲ್ಲಿರುವ ಮಸೀದಿ-ಇ-ಅತಿಕ್ ಸೇರಿದಂತೆ ಹಲವು ಮಸೀದಿಗಳ ಹೆಸರನ್ನು ಕೆಜಿಎಫ್ ಬಾಬು ಉಲ್ಲೇಖಿಸಿದ್ದಾರೆ.
ಭರಪೂರ ಘೋಷಣೆಗಳು
ಚುನಾವಣೆ ವೇಳೆ ಚಿಕ್ಕಪೇಟೆ ಕ್ಷೇತ್ರಕ್ಕೆ ಪ್ರತ್ಯೇಕ ಪ್ರಣಾಳಿಕೆ ಹೊರಡಿಸಿದ್ದ ಕೆಜಿಎಫ್ ಬಾಬು, ಕಾರ್ಡ್ ದಾರರಿಗೆ ಸ್ವಂತ ಹಣದಲ್ಲಿ ಸ್ವಂತ ಮನೆ ನಿರ್ಮಾಣ ಮಾಡಿಕೊಡುತ್ತೇನೆ ಎಂದು ಹೇಳಿದ್ದರು.
ಪ್ರತಿ ಮನೆಗೆ ಜೀವಿತಾವದಿವರೆಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ, SSLC, PUC, ಪದವಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಪ್ರತಿ ಕುಟುಂಬಕ್ಕೆ 5 ಲಕ್ಷ ಆರೋಗ್ಯ ವಿಮೆ ನೀಡೋದಾಗಿ ಘೋಷಣೆ ಮಾಡಿದ್ದರು.