ಬೆಂಗಳೂರು: ಕೊರೋನಾ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಕೇಳಿದ್ದೆವು. ನೆಪಮಾತ್ರಕ್ಕೆ ಮಾಡಿದ್ದಾರಷ್ಟೆ. ಈ ಪ್ಯಾಕೇಜ್ ಯಾವುದಕ್ಕೂ ಸಾಲುವುದಿಲ್ಲ. ಬಡಜನರ ಪರವಾಗಿ ಇರುವ ಸರ್ಕಾರ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.
ಕೊರೋನಾ ಲಾಕ್ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ಬಡವರ್ಗದ ಜನರ ಅನುಕೂಲಕ್ಕಾಗಿ ಸಿಎಂ ಯಡಿಯೂರಪ್ಪ 1,250 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಈ ಪ್ಯಾಕೇಜ್ನಲ್ಲಿ ಕೃಷಿಕರನ್ನು ಕಡೆಗಣಿಸಿದೆ.
ರೈತರಿಗೆ ಯಾವುದೇ ಸಹಾಯಧನ ಕೊಟ್ಟಿಲ್ಲ. ಬೆಳೆ ಹಾನಿ ಬಗ್ಗೆ ಸರ್ವೇ ಕಾರ್ಯ ಆಗಬೇಕಿದೆ. ಪಡಿತರ ವಿತರಣೆ ಬಗ್ಗೆಯೂ ಗೊಂದಲ ಇದೆ. ಕೊರೋನಾ ವಾರಿಯರ್ಸ್ ಆಗಿ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವವರಿಗೆ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ ಎಂದು ಕಿಡಿಕಾರಿದರು.