ಧಾರ್ಮಿಕ ಭಾವನೆಗೆ ಧಕ್ಕೆ ತಂದ್ರಾ ನಟ ಸೈಫ್?

ಧಾರ್ಮಿಕ ಭಾವನೆಗೆ ಧಕ್ಕೆ ತಂದ್ರಾ ನಟ ಸೈಫ್?

ಮುಂಬೈ: ಓಂ ರಾವತ್ ನಿರ್ದೇಶನದ ಪೌರಾಣಿಕ ಚಿತ್ರ ಆದಿಪುರುಷ್ ಸಿನಿಮಾದಲ್ಲಿ ಲಂಕಾದೊರೆ ಲಂಕೇಶ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ವಿರುದ್ಧ ಉತ್ತರ ಪ್ರದೇಶದಲ್ಲಿ ದೂರು ದಾಖಲಾಗಿದೆ.

ಬಾಲಿವುಡ್ ನಟ ಸೈಫ್ ಅಲಿ ಖಾನ್, ತಮ್ಮ ಮುಂದಿನ ಪೌರಾಣಿಕ ಚಿತ್ರ ಆದಿಪುರುಷ್ ಸಿನಿಮಾಕ್ಕೆ ಸಂಬಂಧಿಸಿದ ಸಂದರ್ಶನವೊಂದರಲ್ಲಿ ರಾವಣ ಮಾನವೀಯ ಗುಣವುಳ್ಳವನು ಎಂದು ಹೇಳಿದ್ದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಇವರ ಹೇಳಿಕೆ ರಾವಣ ಸೀತೆಯನ್ನು ಅಪಹರಿಸಿದ್ದನ್ನು ಸಮರ್ಥಿಸುತ್ತದೆ ಎಂದು ಹಲವರು ಟೀಕಿಸಿದ್ದರು. ತಕ್ಷಣ ಎಚ್ಚೆತ್ತುಕೊಂಡ ನಟ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಕ್ಷಮೆ ಕೇಳುತ್ತಿದ್ದೇನೆ ಎಂದಿದ್ದರು.

ಈಗ ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಯ ವಕೀಲರೊಬ್ಬರು ನಟ ಸೈಫ್ ಅಲಿ ಖಾನ್ ಮತ್ತು ನಿರ್ದೇಶಕ ಓಂ ರಾವತ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ಅರ್ಜಿಯನ್ನು ಉತ್ತರ ಪ್ರದೇಶದ ಜೌನ್‍ಪುರ ಜಿಲ್ಲೆಯ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ನ್ಯಾಯಾಲಯದಲ್ಲಿ ಡಿಸೆಂಬರ್ 23 ರಂದು ವಿಚಾರಣೆ ನಡೆಸಲು ನಿಗದಿಪಡಿಸಲಾಗಿದೆ.

ಸೈಫ್ ಅಲಿ ಖಾನ್ ತಮ್ಮ ಸಂದರ್ಶನದಲ್ಲಿ, ’ರಾಕ್ಷಸ ರಾಜನಾಗಿ ನಟಿಸುವುದು ಆಸಕ್ತಿದಾಯಕವಾಗಿದೆ. ನಮ್ಮ ಚಿತ್ರದಲ್ಲಿ ರಾವಣನನ್ನು ಮಾನವೀಯ ಗುಣವುಳ್ಳವನಾಗಿ ಚಿತ್ರಿಸಿದ್ದೇವೆ. ರಾವಣ, ಸೀತೆಯನ್ನು ಅಪಹರಿಸಿದ್ದು ಮತ್ತು ರಾಮನೊಂದಿಗೆ ಯುದ್ಧ ಮಾಡಿದ್ದು, ತನ್ನ ತಂಗಿ ಶೂರ್ಪನಖಿಯ ಮೂಗನ್ನು ಲಕ್ಷ್ಮಣ ಕತ್ತರಿಸಿದ ಎಂಬ ಕೋಪಕ್ಕೆ ಎಂದು ಮಾತನಾಡಿದ್ದರು.

ಓಂ ರಾವತ್ ನಿರ್ದೇಶನದ ಪೌರಾಣಿಕ ಚಿತ್ರ ಆದಿಪುರುಷ್ ಸಿನಿಮಾ ರಾಮಾಯಣವನ್ನು ಆಧರಿಸಿದ್ದು, ಈ ಸಿನಿಮಾದಲ್ಲಿ ನಟ ಪ್ರಭಾಸ್ ರಾಮನ ಪಾತ್ರ ನಿರ್ವಹಿಸಲಿದ್ದಾರೆ.

Related