ಕೆ.ಆರ್.ಪುರ: ಮಹದೇವಪುರ ವಿಧಾನಸಭಾ ಕ್ಷೇತ್ರದ ಮಾರತ್ತಹಳ್ಳಿ ಖಾಸಗಿ ಕಲ್ಯಾಣ ಮಂಟಪದಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಹಾನಿಯಾದ ನಿರಾಶ್ರಿತರಿಗೆ ಪರಿಹಾರ ಮಂಜೂರಾತಿ ಪ್ರಮಾಣ ಪತ್ರ ಶಾಸಕ ಅರವಿಂದ ಲಿಂಬಾವಳಿ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿ ರಾಜಕಾಲುವೆ ಅಕ್ರಮ ಒತ್ತುವರಿ ತೆರುವು ಕಾರ್ಯವನ್ನು ಶರ ವೇಗದಲ್ಲಿ ಹಮ್ಮಿಕೊಂಡಿದ್ದು ಇದಕ್ಕೆ ಎಲ್ಲರೂ ಸಹಕಾರ ನೀಡಬೇಕಾಗಿ ಮನವಿ ಮಾಡಿದರಲ್ಲದೆ, ಈ ಬಾರಿ ಬೆಂಗಳೂರಿನಲ್ಲಿ ದಾಖಲೆಯ ಮಳೆಯ ಆದ ಕಾರಣ ಎಲ್ಲಾ ಕೆರೆಗಳು ತುಂಬಿದ್ದು, ಹಲವರು ನೀರು ಹರಿಯುವ ಕಾಲುವೆಗಳನ್ನೇ ಒತ್ತುವರಿ ಮಾಡಿದ ಕಾರಣ ಮಳೆ ನೀರು ವಸತಿ ಪ್ರದೇಶಗಳಿಗೆ ನುಗ್ಗುವಂತಾಗಿದೆ.
ಇದೇ ಸಂದರ್ಭದಲ್ಲಿ ಮಳೆ ನೀರಿನಿಂದ ಉಂಟಾದ ಪ್ರವಾಹದಲ್ಲಿ ತೊಂದರೆಗೆ ಸಿಲುಕಿದ್ದ ಜನರನ್ನು ರಕ್ಷಿಸಿದ ಸಿಬ್ಬಂದಿ ಮತ್ತು ಸ್ವಯಂಸೇವಕರಿಗೆ ಧನ್ಯವಾದ ತಿಳಿಸಲಾಯಿತು.
ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಸೂಚನೆ ನೀಡಲಾಗಿದ್ದು ಇದರಿಂದ ಮುಂದೆ ಮಳೆ ನೀರಿನ ತೊಂದರೆ ಕಡಿಮೆಯಾಗಲಿದೆ ಎನ್ನುವ ಭರವಸೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಮಳೆ ನೀರು ಮನೆಗೆ ನುಗ್ಗಿ ನಷ್ಟ ಅನುಭವಿಸಿದ ನಿರಾಶ್ರಿತರಿಗೆ ಡೈರೆಕ್ಟ್ ಫಂಡ್ ಟ್ರಾನ್ಸ್ಫರ್ ಮೂಲಕ ಕೂಡಲೇ ಪರಿಹಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಂಟಿ ಆಯುಕ್ತರಾದ ವೆಂಕಟಾಚಲಪತಿ, ಕ್ಷೇತ್ರ ಅಧ್ಯಕ್ಷರಾದ ಮನೋಹರ ರೆಡ್ಡಿ, ನಟರಾಜ್, ಮಾಜಿ ಪಾಲಿಕೆ ಸದಸ್ಯ ಶ್ರೀಧರ್ ರೆಡ್ಡಿ, ಮುಖಂಡರಾದ ನಲ್ಲೂರಹಳ್ಳಿ ಚಂದ್ರಶೇಖರ್ ರೆಡ್ಡಿ, ರಾಜೇಶ್, ಮಿಥುನ್ ರೆಡ್ಡಿ, ಶೇಖರ್ ರೆಡ್ಡಿ, ಸೇರಿದಂತೆ ಅಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.