ಸಿಎಂ ಮನೆಗೆ ಸಚಿವ ಸ್ಥಾನ ಆಕಾಂಕ್ಷಿಗಳು

ಸಿಎಂ ಮನೆಗೆ ಸಚಿವ ಸ್ಥಾನ ಆಕಾಂಕ್ಷಿಗಳು

ಬೆಂಗಳೂರು,ಫೆ. 5 : ಬಹು ನಿರೀಕ್ಷೆಯ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಾಳೆ ನಡೆಯಲಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳು ಇಂದು ಬೆಳಗ್ಗೆಯಿಂದಲೇ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮನೆಗೆ ದಾಂಗುಡಿಯಿಡುತ್ತಿದ್ದಾರೆ. ಅಲ್ಲದೆ, ತಮಗೆ ಸಚಿವ ಸ್ಥಾನ ಖಾಯಂ ಮಾಡುವಂತೆ ಮತ್ತೊಂದು ಸುತ್ತಿನ ಲಾಬಿಗೆ ಮುಂದಾಗಿದ್ದಾರೆ. ನಾಳಿನ ಸಂಪುಟದಲ್ಲಿ 13 ಶಾಸಕರಿಗೆ ಸಚಿವ ಸ್ಥಾನ ನೀಡುವುದು ಗ್ಯಾರಂಟಿ ಎಂದು ಬಿಎಸ್ವೈ ಈಗಾಗಲೇ ತಿಳಿಸಿದ್ದಾರೆ. 13 ಜನ ಯಾರು ಎಂಬುದು ಮಾತ್ರ ಈವರೆಗೆ ಫೈನಲ್ ಆಗಿಲ್ಲ. ಉಮೇಶ್ ಕತ್ತಿ. ಸಿ.ಪಿ. ಯೋಗೇಶ್ವರ್ ಸಂಪುಟ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆಯಾದರೂ ಕೊನೆ ಕ್ಷಣದಲ್ಲಿ ಏನು ಬೇಕಾದರೂ ನಡೆಯಬಹುದು ಎಂಬ ಭಯ ಎಲ್ಲರಲ್ಲೂ ಇದೆ. ಇದೇ ಕಾರಣಕ್ಕೆ ಇಂದು ಬೆಳಗ್ಗೆಯೇ ಕೋಲಾರ ಶಾಸಕ ಡಾ. ಸುಧಾಕರ್, ಉಮೇಶ್ ಕತ್ತಿ ಮತ್ತು ಸಿ.ಪಿ. ಯೋಗೇಶ್ವರ್ ಬಿಎಸ್ವೈ ಮನೆಗೆ ಆಗಮಿಸಿದ್ದಾರೆ. ಸಿಎಂ ಮನೆಗೆ ಬರುವಾಗಲೇ ತಿರುಪತಿ ತಮ್ಮಪ್ಪನ ಪ್ರಸಾದವನ್ನು ಜೊತೆಗೆ ತಂದಿದ್ದ ಸಿ.ಪಿ. ಯೋಗೇಶ್ವರ್ ಯಡಿಯೂರಪ್ಪನವರಿಗೆ ಪ್ರಸಾದ ನೀಡಿ ನಂತರ ಪ್ರಸ್ತುತ ರಾಜ್ಯ ರಾಜಕಾರಣ ಹಾಗೂ ಸಂಪುಟ ವಿಸ್ತರಣೆ ಕುರಿತು ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.

Related