ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಅವೈಜ್ಞಾನಿಕ..

ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಅವೈಜ್ಞಾನಿಕ..

ಬೆಂಗಳೂರು, ಜು 16 : ‘ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಅವೈಜ್ಞಾನಿಕವಾಗಿದ್ದು, ಬಿಜೆಪಿ ಪಕ್ಷಕ್ಕೆ ಅನುಕೂಲವಾಗುವಂತೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಲಾಗಿದೆ. ಈ ಮರುವಿಂಗಡಣೆ ವಿಚಾರವಾಗಿ 3 ಸಾವಿರಕ್ಕೂ ಹೆಚ್ಚು ಆಕ್ಷೆಪಗಳು ವ್ಯಕ್ತವಾಗಿದ್ದರೂ ಹೆಸರು ಬದಲಾವಣೆ ಹೊರತು ಯಾವುದೇ ವಾರ್ಡ್ ಗಳಲ್ಲಿ ಬದಲಾವಣೆ ತಂದಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.

ಶನಿವಾರ ಮಾತನಾಡಿದ, ಅವರು ವಾರ್ಡ್ ಮರುವಿಂಗಡಣೆ ವಿಚಾರವಾಗಿ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸಂಬಂಧಿಸಿದಂತೆ ಸರ್ಕಾರ ವಾರ್ಡ್ ಮರುವಿಂಗಡಣೆಯನ್ನು ಪ್ರಕಟಿಸಿ, 15 ದಿನ ಆಕ್ಷೇಪಗಳಿಗೆ ಅವಕಾಶ ಮಾಡಿಕೊಟ್ಟಿತ್ತು. ಈ ವಿಚಾರವಾಗಿ 3 ಸಾವಿರಕ್ಕೂ ಹೆಚ್ಚು ಆಕ್ಷೇಪಗಳು ಸಲ್ಲಿಕೆಯಾಗಿದ್ದು ಇದರಲ್ಲಿ ಹಲವು ಆಕ್ಷೇಪಗಳು ವಾರ್ಡ್ ಗಳ ಹೆಸರು ಬದಲಾವಣೆ ವಿಚಾರವಾಗಿವೆ. ಉಳಿದಂತೆ ಎಲ್ಲ ಆಕ್ಷೇಪಗಳು ಅವೈಜ್ಞಾನಿಕವಾಗಿ ವಾರ್ಡ್ ಮರುವಿಂಗಡಣೆ ಮಾಡಲಾಗಿದೆ ಎಂಬ ವಿಚಾರವಾಗಿ ಸಲ್ಲಿಕೆಯಾಗಿದೆ.

ಅಮಿಬಾಗಳಿಗಾದರೂ ತಕ್ಕಮಟ್ಟಿಗೆ ಆಕಾರವಿರುತ್ತದೆ. ಆದರೆ ಈಗ ಮರುವಿಂಗಡಣೆಯಾದ ವಾರ್ಡ್ ಗಳಿಗೆ ಆಕಾರವೇ ಇಲ್ಲದಂತಾಗಿದೆ.  ಈ ವಿಚಾರವಾಗಿ ನಾನು ಈ ಹಿಂದೆ ಅನೇಕ ವಿಚಾರ ಹೇಳಿದ್ದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಕಂದಾಯ ಅಧಿಕಾರಿಗಳು, ಜಂಟಿ ಆಯುಕ್ತರು ಸೇರಿ ವಾರ್ಡ್ ಗಳ ಗಡಿ ಕುರಿತು ಚರ್ಚೆ ಮಾಡಿ ಮಾರ್ಗಸೂಚಿಯಂತೆ ನಿರ್ಧಾರ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ 28 ವಿಧಾನಸಭಾ ಕ್ಷೇತ್ರದ ಕಂದಾಯ ಅಧಿಕಾರಿಗಳಿಗೆ, ಜಂಟಿ ಆಯುಕ್ತರಿಗೆ ಯಾವುದೇ ಮಾಹಿತಿ ಇಲ್ಲ. ಈ ಮರುವಿಂಗಡಣೆ ಪ್ರಕ್ರಿಯೆ ಬಿಜೆಪಿ ಶಾಸಕರು, ಸಂಸದರ ಕಚೇರಿಯಲ್ಲಿ ನಿರ್ಧಾರವಾಗಿ ಕೇಶವಕೃಪದಲ್ಲಿ ಅಂತಿಮ ಒಪ್ಪಿಗೆ ಪಡೆಯಲಾಗಿದೆ.

ಈಗ ಇಷ್ಟೋಂದು ಆಕ್ಷೇಪ ವ್ಯಕ್ತವಾದ ಬಳಿಕವೂ ಕಂದಾಯ ಅಧಿಕಾರಿಗಳಾಗಲಿ, ಜಂಟಿ ಆಯುಕ್ತರಾಗಲಿ ಬಂದು ಪರಿಶೀಲನೆ ನಡೆಸಲೇ ಇಲ್ಲ. ಈಗ ಈ ಆಕ್ಷೇಪಗಳು ಸಿಎಂ ಕಚೇರಿಯಂದ ಆಚೆ ಬರಲೇ ಇಲ್ಲ. 243 ವಾರ್ಡ್ ಗಳು ಸರಿಯಾಗಿವೆ ಎಂದು ಸಣ್ಣ ಬದಲಾವಣೆ ಇಲ್ಲದೆ ಮತ್ತೆ ಅದನ್ನೇ ಬಿಡುಗಡೆ ಮಾಡಿದ್ದಾರೆ. ಕೇವಲ ಹೆಸರಿಗೆ ಮಾತ್ರ ಆಕ್ಷೇಪಗಳನ್ನು ಸಂಗ್ರಹಿಸಿದ್ದಾರೆ ಎಂದರು.

 

Related