ಸಚಿವರ ಕಾಲ ಕೆಳಗೆ ರಾಶಿ ರಾಶಿ ಹಣ

ಸಚಿವರ ಕಾಲ ಕೆಳಗೆ ರಾಶಿ ರಾಶಿ ಹಣ

ಬೆಂಗಳೂರು: ರಾಜ್ಯದಲ್ಲಿ ಒಂದು ಕಡೆ ಮಳೆ ಇಲ್ಲ. ಇನ್ನೊಂದು ಕಡೆ ಬರಗಾಲ. ಆದರೆ ರಾಜ್ಯದಲ್ಲಿ ಸಚಿವರು ಮಾತ್ರ ಮೋಜು ಮಸ್ತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಹೌದು ಸಚಿವ ಶಿವಾನಂದ್ ಪಾಟೀಲ್ ಅವರು ಮದುವೆ ಕಾರ್ಯಕ್ರಮ ಒಂದರಲ್ಲಿ ದುಡ್ಡನ್ನು ಅವರ ಕಾಲ ಕೆಳಗಡೆ ಹಾಕಿಕೊಂಡು ಕೂತಿರುವ ದೃಶ್ಯ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿದ್ದು ಸಚಿವರ ಈ ವರ್ತನೆಯ ಬಗ್ಗೆ ಬಾರಿ ಟೀಕೆ ನಡೆಯುತ್ತಿದೆ.

ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಶಿವಾನಂದ ಪಾಟೀಲ್ ಕಾಲಡಿಯಲ್ಲಿ ರಾಶಿ ರಾಶಿ ನೋಟುಗಳು ಇರುವ ಫೋಟೋ ಹಾಗೂ ವಿಡಿಯೋ ವೈರಲ್ ಆಗುತ್ತಿದೆ. ಸಚಿವರ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಹೈದರಾಬಾದ್‌ನ ರೆಸಾರ್ಟ್‌ ಒಂದರಲ್ಲಿ ನಡೆದ ಬೀದರ್ ಕಾಂಗ್ರೆಸ್‌ ಮುಖಂಡರೊಬ್ಬರ ಮಗನ ಮದುವೆ ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ ಪಾಟೀಲ್ ಭಾಗಿಯಾಗಿದ್ದರು. ಈ ಮದುವೆಯಲ್ಲಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಕೂಡಾ ಉಪಸ್ಥಿತರಿದ್ದರು. ಮದುವೆ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಹಾಡಿನ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ನೋಟಿನ ಮಳೆ ಸುರಿಯಲಾಗಿದೆ.

ಈ ವೇಳೆ ವೇದಿಕೆಯ ಕೆಳಗಡೆ ಸಚಿವ ಶಿವಾನಂದ ಪಾಟೀಲ್‌ ಹಾಗೂ ಇತರ ಅತಿಥಿಗಳು ಕುಳಿತುಕೊಂಡಿದ್ದರು. ಶಿವಾನಂದ ಪಾಟೀಲರ ಮುಂದೆಯೇ ಕಾರ್ಯಕ್ರಮಲ್ಲಿ ಭಾಗಿಯಾದವರು ಸಚಿವರ ಮೇಲೆ ಹಣದ ಸುರಿಮಳೆ ಸುರಿಯುತ್ತಿರುವುದು ವಿಡಿಯೋದಲ್ಲಿದೆ. ತಾವು ಕುಳಿತುಕೊಂಡಿರುವ ಸುತ್ತ ರಾಶಿ ರಾಶಿ ನೋಟುಗಳು ಬಿದ್ದಿದ್ದರೂ ಸಚಿವರು ಅವುಗಳ ಮೇಲೆ ಕಾಲಿಟ್ಟು ಆರಾಮವಾಗಿ ಕುಳಿತುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ ಕಲೆಕ್ಷನ್ ದಂಧೆಯಲ್ಲಿ ಕಾಂಗ್ರೆಸ್ ಸರ್ಕಾರದ ಸಚಿವರು ನಿತ್ಯವೂ ಮಿಂದೇಳುತ್ತಿದ್ದಾರೆ. ನಾಡಿನ ಜನರಿಂದ ಲೂಟಿ ಮಾಡಿದ ಹಣದಲ್ಲಿ ಮಂತ್ರಿಗಳು ಹೇಗೆ ಮಜಾ ಉಡಾಯಿಸುತ್ತಿದ್ದಾರೆ ಎಂಬುವುದನ್ನು ಸಕ್ಕರೆ ಸಚಿವ ಶಿವಾನಂದ ಪಾಟೀಲರು ನೈಜ ಪ್ರಾತ್ಯಕ್ಷಿತೆ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದೆ.

 

 

Related