ಆತ್ಮಹತ್ಯೆಗೆ ಯತ್ನಿಸಿದ ಅಪ್ರಾಪ್ತ ಬಾಲಕಿ

ಆತ್ಮಹತ್ಯೆಗೆ ಯತ್ನಿಸಿದ ಅಪ್ರಾಪ್ತ ಬಾಲಕಿ

ಮೈಸೂರು : ಕುಡುಕ ತಂದೆಯ ಅವಾಂತರದಿಂದಾಗಿ  ಅಪ್ರಾಪ್ತ ಬಾಲಕಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

15 ವರ್ಷದ ಅಪ್ರಾಪ್ತ ಬಾಲಕಿಗೆ ಮದುವೆ ಮಾಡಲು ಕುಡುಕ ಅಪ್ಪ ಹೊರಟಿದ್ದ. ಇದರಿಂದ ಬೇಸತ್ತ ಬಾಲಕಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ತಿ. ನರಸೀಪುರ ಪಟ್ಟಣದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ತಾವರೆಕಟ್ಟೆ ಮೋಳೆ ಗ್ರಾಮದ ಸಿದ್ದಶೆಟ್ಟಿ ಎಂಬುವರ ಪುತ್ರಿ ನದಿಗೆ ಹಾರಲು ಬಂದಿದ್ದಳು. ಗುಂಜಾನರಸಿಂಹ  ಸ್ವಾಮಿ ದೇವಸ್ಥಾನದ ಬಳಿ ತೆಪ್ಪ ನಡೆಸುವವರು ಆಕೆಯ ಮನವೊಲಿಸಿ ಆತ್ಮಹತ್ಯೆ ಯತ್ನವನ್ನು ವಿಫಲಗೊಳಿಸಿದರು.

ಈ ಕುರಿತು ಸಮಾಜ ಸೇವಕ ಮಾದೇಶ್‌ಗೆ ಅವರು ಮಾಹಿತಿ ನೀಡಿದ್ದರು. ಮಾದೇಶ್ ಬಾಲಕಿಯ ಮನವೊಲಿಸಿ ತಮ್ಮ ಮನೆಗೆ ಕರೆದೊಯ್ದು, ಉಪಚರಿಸಿ ಪೊಲೀಸರಿಗೆ ಮಾಹಿತಿ ನೀಡಿದರು, ಪೋಷಕರಿಗೂ ವಿಷಯ ತಿಳಿಸಿದರು.

ಪೊಲೀಸರು ಬಾಲಕಿಯನ್ನು, ಪೋಷಕರನ್ನು ಠಾಣೆಗೆ ಕರೆಸಿಕೊಂಡು ಮದುವೆ ಪ್ರಸ್ತಾಪ ಕೈಬಿಟ್ಟು ವಿದ್ಯಾಭ್ಯಾಸ ಕೊಡಿಸುವಂತೆ ಅರಿವು ಮೂಡಿಸಿ, ಬಾಲಕಿಯನ್ನು ಕಳುಹಿಸಿಕೊಟ್ಟಿದರು.

Related