ಬೆಂಗಳೂರು: 2023 ನೇ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ತನ್ನದೇ ಆದ ಪಕ್ಷವನ್ನು ಸ್ಥಾಪಿಸಿ ಸ್ವತಂತ್ರವಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಭರ್ಜರಿ ಗೆಲುವನ್ನು ಸಾಧಿಸಿದ ಜನಾರ್ಧನ್ ರೆಡ್ಡಿ ಅವರು ಈಗ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.
ಹೌದು, ಇಂದು ಬೆಂಗಳೂರಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯ ಅಧ್ಯಕ್ಷ ಬಿ ಈ ವಿಜಯೇಂದ್ರ ಅವರ ಸಮ್ಮುಖದಲ್ಲಿ ಇಂದು (ಸೋಮವಾರ ಮಾ.25) ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಜನಾರ್ಧನ್ ರೆಡ್ಡಿ ಅವರು ಅಧಿಕೃತವಾಗಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.
ತಮ್ಮ ಸ್ವಂತ ಕೆಆರ್ಪಿಪಿ ಪಕ್ಷವನ್ನು ತೊರೆದು ಬಿಜೆಪಿ ಪಕ್ಷವನ್ನು ಸೇರಿರುವ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿ ಬಿಜೆಪಿ ಸೇರ್ಪಡೆಯಾದರು. ಈ ಮೂಲಕ ಜನಾರ್ದನ ರೆಡ್ಡಿ ತವರಿಗೆ ಮರಳಿದ್ದಾರೆ. ಹಾಗೆ ಬಿಜೆಪಿಯಲ್ಲಿ ತಮ್ಮ ಕೆಆರ್ಪಿಪಿ ಪಕ್ಷವನ್ನೂ ವಿಲೀನಗೊಳಿಸಿದ್ದಾರೆ. ಬಿಜೆಪಿ ಸೇರ್ಪಡೆ ಬಳಿಕ ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತನನಾಡಿದ ಜನಾರ್ದನ ರೆಡ್ಡಿ, ನನ್ನ ರಕ್ತದ ಕಣ ಕಣದಲ್ಲಿ ಬಿಜೆಪಿ ಇದೆ ಎಂದರು.
ಬಿಜೆಪಿ ಪಕ್ಷದ ಜೊತೆ ಕೆಆರ್ಪಿಪಿ ಪಕ್ಷವನ್ನು ವಿಲೀನ ಮಾಡುತ್ತಿದ್ದೇನೆ. ಬಿಎಸ್ ಯಡಿಯೂರಪ್ಪ ಆಶೀರ್ವಾದ, ಬಿವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಪಕ್ಷಕ್ಕೆ ಸೇರಿದ್ದೇನೆ. ಕೇಂದ್ರ ಸಚಿವ ಅಮಿತ್ ಶಾ ಅವರು ನನಗೆ ಪಕ್ಷಕ್ಕೆ ಬನ್ನಿ ಅಂದರು. ಕರ್ನಾಟಕದಲ್ಲಿ ಬಿಜೆಪಿ ನೆಲೆಯೂರಲು ಬಿಎಸ್ ಯಡಿಯೂರಪ್ಪ ಕಾರಣ. ಅವರು ಮುಖ್ಯಮಂತ್ರಿಯಾಗಿದ್ದಾಗ, ನನಗೆ ಸಚಿವ ಸ್ಥಾನ ಕೊಟ್ಟಿದ್ದರು. ಈಗ ಅವರ ಸುಪುತ್ರ ಇದ್ದಾರೆ. ತಂದೆ ಮಗನ ಜೊತೆ ಈಗ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಾನು ಯಾವ ಷರತ್ತು ಇಲ್ಲದೆ ಕಾರ್ಯಕರ್ತನಾಗಿ ಬಿಜೆಪಿಗೆ ಸೇರಿದ್ದೇನೆ. ಯಾವದೆ ಹುದ್ದೆಯ ಆಕಾಂಕ್ಷೆ ನನಗೆ ಇಲ್ಲ ಎಂದು ತಿಳಿಸಿದರು.