ಅಧಿಕಾರ ಮುಂದುವರೆಸಲು ಅವಕಾಶ ಕಲ್ಪಸಿ

ಅಧಿಕಾರ ಮುಂದುವರೆಸಲು ಅವಕಾಶ ಕಲ್ಪಸಿ

ಕೋಲಾರ-ಆರ್‌ಎಸ್‌ಎಸ್ ಸಂಘದ ಮೂಲಕ ಸ್ವಯಂ ಸೇವಕರಾಗಿ ರಾಜಕೀಯ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷವನ್ನು ದಕ್ಷಿಣ ಭಾರತದಲ್ಲಿಯೇ ಎತ್ತರದ ಸ್ಥಾನಕ್ಕೆ ತರುವಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಪಾತ್ರ ಪ್ರಾಮುಖ್ಯತೆ ಹೊಂದಿದ್ದು, ವಯಸ್ಸಿನ ನೆಪ ಹೇಳಿ ಅಧಿಕಾರದಿಂದ ಕೆಳಗಿಳಿಸುವ ದುಸ್ಸಾಹಸಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಗಬಾರದು ಎಂದು ಕೋಲಾರ ದಿಗಂಬರೇಶ್ವರ ಸಂಸ್ಥಾನ ಮಠದ ಯೋಗಿ ಕಲ್ಲಿನಾಥ ರವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಳಿವಯಸ್ಸಿನಲ್ಲಿಯೂ ಕ್ರಿಯಾಶೀಲರಾಗಿ ನಾಡಿನ ಪ್ರತಿಯೊಂದು ಸಮುದಾಯಗಳ ನಾಗರೀಕರ ಹಿತಕಾಪಾಡುವಲ್ಲಿ ಹಾಗೂ ಕೊರೋನಾ ಮಹಾಮಾರಿ ಉಲ್ಬಣಿಸಿದಾಗ, ಪ್ರವಾಹ ಪರಿಸ್ಥಿತಿಯಲ್ಲಿಯೂ ಕೂಡ ಜನರ ಹಿತ ಕಾಪಾಡುವಲ್ಲಿ ಶ್ರಮವಹಿಸಿದ ಧೀಮಂತ ನಾಯಕನಿಗೆ ಅವಧಿ ಪೂರ್ಣಗೊಳಿಸುವ ತನಕ ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ಕಲ್ಪಸಿಕೊಡಬೇಕೆಂದು ಆಗ್ರಹಿಸಿದರು.
ವೀರಶೈವ ಲಿಂಗಾಯತ ಸಮುದಾಯವು ಅಲ್ಲದೇ ದೀನದಲಿತರು, ಹಿಂದುಳಿದ ವರ್ಗದವರು ಕೂಡ ಯಡಿಯೂರಪ್ಪನವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದು ಅವರನ್ನು ಅಧಿಕಾರದಿಂದ ಮುಕ್ತಗೊಳಿಸುವ ಸಂದರ್ಭ ಬಂದರೆ ಅವರಂತೆಯೇ ಕಾರ್ಯನಿರ್ವಹಿಸುವ ಲಿಂಗಾಯತ ಸಮುದಾಯದ ವ್ಯಕ್ತಿಯನ್ನು ಗುರುತಿಸಿ ಬಿಜೆಪಿ ವರಿಷ್ಠರು ಅಧಿಕಾರ ನೀಡಲು ಸನ್ನದ್ಧರಾಗಬೇಕು ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂದು ಹೇಳಿದರು.

Related