ಮಡಿಕೇರಿ, ಫೆ. 21 : ಇಂದು ಮಹಾಶಿವರಾತ್ರಿ ಸಡಗರ ಎಲ್ಲೆಲ್ಲೂ ಶಿವ ಜಪ. ಮಹಾರುದ್ರ ಅಭಿಷೇಕ ಪ್ರಿಯ ಮಹದೇಶ್ವರನ ಆರಾಧನೆ ನಡೆಯುತ್ತಿದೆ. ಶಿವ ಮಂದಿರಗಳಲ್ಲಿ ವಿಶೇಷ ಪೂಜೆಗಳ ಮೂಲಕ ವಿಷಕಂಠನ ಸ್ಮರಣೆ ಮಾಡುತ್ತಿರುವ ಭಕ್ತರು ನಾನಾ ವಿಧಧ ಅಭಿಷೇಕಗಳ ಮೂಲಕ ನಮಿಸುತ್ತಿದ್ದಾರೆ. ಇತ್ತ ಕಾಫಿನಾಡು ಕೊಡಗಿನಲ್ಲಿಯೂ ಕೂಡ ಶಿವಾರಾಧನೆ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ.
ಮಂಜಿನ ನಗರಿ ಮಡಿಕೇರಿಗೆ ಹೊಂದಿಕೊಂಡಿರುವ ಕರ್ಣಂಗೇರಿಯ ಶ್ರೀ ರಾಜರಾಜೇಶ್ವರಿ ಸನ್ನಿಧಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯದಲ್ಲಿ ಇಂದು ಮಹಾದೇವನಿಗೆ ಹಾಲು, ನೀರು, ತುಪ್ಪ, ಜೇನು, ಎಳನೀರು, ಫಲ ಪುಷ್ಪಗಳಿಂದ ಭಕ್ತರು ಅಭಿಷೇಕ ಮಾಡಿದ್ದಾರೆ. ಅದರಲ್ಲೂ ಕ್ಷೇತ್ರದಲ್ಲಿ ನೆಲೆ ನಿಂತಿರುವ 52 ಅಡಿ ಎತ್ತರದ ಬೃಹತ್ ಶಿವ ಮೂರ್ತಿಯನ್ನು ಕಂಡು ಪುಳಕಿತರಾಗುವ ಭಕ್ತರು, ಗರ್ಭಗುಡಿಯ ಶಿವಲಿಂಗಕ್ಕೆ ಶಂಖನಾಧ, ಗಂಟೆ ಶಬ್ಧದ ಮೂಲಕ ಪೂಜೆ ಪುನಸ್ಕಾರ ಮಾಡಿ ಬಳಿಕ ಬೃಹದಾಕಾರದ ಶಿವ ವಿಗ್ರಹಕ್ಕೂ ನಮಿಸುತ್ತಾರೆ.