ಲಾಕ್ಡೌನ್: ಬೆಳೆ ಹಾಳಾಗದಂತೆ ಮೌಲ್ಯವರ್ಧನೆ; ಉತ್ತಮ ಆದಾಯ ನಿರೀಕ್ಷೆಯಲ್ಲಿ ಕೊಪ್ಪಳ ರೈತ

ಲಾಕ್ಡೌನ್: ಬೆಳೆ ಹಾಳಾಗದಂತೆ ಮೌಲ್ಯವರ್ಧನೆ; ಉತ್ತಮ ಆದಾಯ ನಿರೀಕ್ಷೆಯಲ್ಲಿ ಕೊಪ್ಪಳ ರೈತ

ಕೊಪ್ಪಳ: ಲಾಕ್ಡೌನ್ ಪರಿಸ್ಥಿತಿಯಲ್ಲಿಯೂ ತನ್ನ ಬೆಳೆ ಹಾಳಾಗದಂತೆ ಮೌಲ್ಯವರ್ಧನೆ ಮಾಡಿ ಉತ್ತಮ ಆದಾಯದ ನಿರೀಕ್ಷೆಯಲ್ಲಿರುವ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಕೃಷಿಕ ಭೀಮರಾವ್ ದೇಶಪಾಂಡೆ.

ಕೋವಿಡ್-19 ನಿಂದಾಗಿ ದೇಶದಾದ್ಯಂತ ಇರುವ ಲಾಕ್ಡೌನ್ನಿಂದಾಗಿ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ವಾಣಿಜ್ಯ ಬೆಳೆಗಳಂಥ ದ್ರಾಕ್ಷಿ ಬೆಳೆಗಾರರು ಬೆಲೆ ಕುಸಿತದಿಂದಾಗಿ ಮತ್ತು ಬೇಡಿಕೆ ಇಲ್ಲದೇ ಸಂಕಷ್ಟದಲ್ಲಿದ್ದಾರೆ.

ಇಂತಹ ಸಂದರ್ಭದಲ್ಲಿ ವಿಜ್ಞಾನಿಗಳಿಂದ ಸಲಹೆ ಪಡೆದು ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆಗೆ ಮುಂದಾಗಿದ್ದಾರೆ. ಇಲಾಖಾ ಯೋಜನೆಗಳನ್ನು ರೈತರು ಸದ್ಭಳಕೆ ಮಾಡಿಕೊಂಡು ತಮ್ಮ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ತೋಟಗಾರಿಕೆ ಇಲಾಖೆ ಸಹಾಯಹಸ್ತ ನೀಡುತ್ತಿದೆ.

ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಕಟಗಿಹಳ್ಳಿ ಗ್ರಾಮದ ರೈತರಾದ ಭೀಮರಾವ್ ದೇಶಪಾಂಡೆ ತನ್ನ 3 ಎಕರೆ ಜಮೀನಿನಲ್ಲಿ ಸೋನಾಕಾ ಹಾಗೂ ಇತರೆ ತಳಿಯ ದ್ರಾಕ್ಷಿ ಬೆಳೆದಿದ್ದಾರೆ. 2016 ರಲ್ಲಿ ದ್ರಾಕ್ಷಿ ಬೆಳೆಯಲು ಕ್ರಮ ಕೈಗೊಂಡಿದ್ದು, ಕಳೆದ ವರ್ಷ 10 ಲಕ್ಷಕ್ಕೂ ಅಧಿಕ ಆದಾಯ ಪಡೆದಿದ್ದರು. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ದ್ರಾಕ್ಷಿ ಬೆಳೆ ತಡವಾಗಿ ಕಟಾವಿಗೆ ಬಂದಿದ್ದು, ಬೇಡಿಕೆ ಇರದೆ ಬೆಲೆ ಕುಸಿತದಿಂದಾಗಿ ತೀವ್ರ ಸಂಕಷ್ಟದಲ್ಲಿದ್ದರು. ಗಾಯದ ಮೇಲೆ ಬರೆ ಎಳೆದಂತೆ ಕೊರೋನಾ ಮಾರಿಯಿಂದಾಗಿ ಉಂಟಾದ ಲಾಕ್ ಡೌನ್ನಿಂದಾಗಿ ದ್ರಾಕ್ಷಿ ಮಾರಾಟವಾಗದೇ ಇವರ ಕಣ್ಣೀರು ಕಪಾಳಕ್ಕಿಳಿಯಿತು.

ಇಂತಹ ಸಂದರ್ಭದಲ್ಲಿ ರೈತ ಭೀಮರಾವ್ ದೇಶಪಾಂಡೆ ಅವರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಲಿಂಗನಗೌಡ ಪೋಲಿಸಪಾಟೀಲ್ರನ್ನು ಭೇಟಿಯಾಗಿ ತಮ್ಮ ಅಳಲನ್ನು ತೋಡಿಕೊಂಡರು. ಆಗ ಲಿಂಗನಗೌಡ ಪೋಲಿಸಪಾಟೀಲ್ ರೈತರಿಗೆ ಒಣದ್ರಾಕ್ಷಿ ಮಾಡುವ ಶೆಡ್ ನಿರ್ಮಿಸಿಕೊಂಡು ಮೌಲ್ಯವರ್ಧನೆ ಮಾಡಿದರೆ ವರ್ಷಾನುಗಟ್ಟಲೆ ಶೇಖರಿಸಿಟ್ಟು ಉತ್ತಮ ಬೆಲೆ ಬಂದಾಗ ಮಾರಿಕೊಂಡು ಉತ್ತಮ ಲಾಭ ಗಳಿಸಬಹುದೆಂದು ಸಲಹೆ ನೀಡಿದರು. ಭೀಮರಾವ್ ಮಣೂಕ ಮಾಡುವ ವಿಧಾನವನ್ನು ಕೃಷಿ ವಿಸ್ತರಣಾ ಶಿಕ್ಷಣಾ ಕೇಂದ್ರದ ವಿಜ್ಞಾನಿಗಳಿಂದ ಹಾಗೂ ಹಿರೇವಡ್ರಕಲ್ ಗ್ರಾಮದ ರೈತ ಬಸವರಾಜ ಕಾಡಾಪೂರ ಮಾರ್ಗದರ್ಶನದಲ್ಲಿ ಈ ಬಗ್ಗೆ ತಿಳಿದುಕೊಂಡು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ.

ಹಣಕಾಸಿನ ಅಭಾವವಿದ್ದರೂ ಸಾಲ ಮಾಡಿ ಹಿರೇವಂಕಲಕುಂಟಾ ಹೋಬಳಿಯ ತೋಟಗಾರಿಕೆ ಅಧಿಕಾರಿ ಮಾಬುಸಾಬ ಪಾಟೀಲ್ರವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಮಣೂಕ ಶೆಡ್ ನಿರ್ಮಾಣ ಮಾಡಿಕೊಂಡು ಏಪ್ರಿಲ್ ಮೊದಲ ವಾರದಲ್ಲಿ ಹಣ್ಣುಗಳನ್ನು ಕಟಾವು ಮಾಡಿ ಒಣ ದ್ರಾಕ್ಷಿ ಮಾಡಲು ಸಿದ್ಧಪಡಿಸಿದ್ದಾರೆ. ಸದ್ಯ ಒಣ ದ್ರಾಕ್ಷಿ ಸಿದ್ಧವಾಗಿದ್ದು, ವರ್ಗಿಕರಿಸಿ ಪ್ಯಾಕಿಂಗ್ ಮಾಡಿ ಶೈತ್ಯಾಗಾರದಲ್ಲಿ ಸಂಗ್ರಹಿಸಿ ಉತ್ತಮ ಬೆಲೆ ಬಂದಾಗ ಮಾರಾಟ ಮಾಡುವ ನಿರೀಕ್ಷೆಯಲ್ಲಿದ್ದಾರೆ.

“ನಾನು ಬೆಳೆದ ದ್ರಾಕ್ಷಿ ಮಾರುಕಟ್ಟೆ ಇಲ್ಲದೇ ನಾನು ಸಂಕಷ್ಟದಲ್ಲಿದ್ದೆ ಆಗ ಕೊಪ್ಪಳ ತೋಟಗಾರಿಕೆ ಉಪನಿರ್ದೇಶಕರು ಮತ್ತು ಯಲಬುರ್ಗಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಿದಾಗ ಮಣೂಕಾ ಶೆಡ್ ನಿರ್ಮಿಸಿಕೊಂಡು ಒಣ ದ್ರಾಕ್ಷಿ ಮಾಡಲು ಸಲಹೆ ನೀಡಿದರು ಅದರಂತೆ ನಾನು ಕಾರ್ಯಪ್ರವೃತ್ತನಾಗಿ ಸುಮಾರು 30 ಟನ್ನಷ್ಟು ದ್ರಾಕ್ಷಿ ಹಣ್ಣುನ್ನು ಮಣೂಕ ಮಾಡಲು ನಿರ್ಧರಿಸಿದೆ. ಈ ಸದ್ಯ 5 ರಿಂದ 6 ಟನ್ ಒಣ ದ್ರಾಕ್ಷಿ ಸಿದ್ದವಾಗಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ಬೆಲೆ ದೊರೆಯುವ ನಿರೀಕ್ಷೆಯಲ್ಲಿದ್ದೇನೆ. ನನ್ನ ಆದಾಯ ಸಂಪೂರ್ಣ ಕುಸಿಯುವ ಸಮಯದಲ್ಲಿ ತೋಟಗಾರಿಕೆ ಇಲಾಖೆ ಸಹಾಯದಿಂದ ನನ್ನ ಬೆಳೆ ಉಳಿಸಿಕೊಳ್ಳುವಂತಾಯಿತು. ತೋಟಗಾರಿಕೆ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ನಾನು ಚಿರಋಣಿ”, ಎನ್ನುತ್ತಾರೆ ಭೀಮರಾವ್ ದೇಶಪಾಂಡೆ.

“ಕೇವಲ ಒಂದೇ ವಾರದಲ್ಲಿ ಇಲಾಖೆಯ ಮಾರ್ಗದರ್ಶನದಲ್ಲಿ ಒಣ ದ್ರಾಕ್ಷಿ ಶೆಡ್ ನಿರ್ಮಿಸಿಕೊಂಡು ಹಾಳಾಗುತ್ತಿರುವ ದ್ರಾಕ್ಷಿ ಹಣ್ಣನ್ನು ಉಳಿಸಿಕೊಂಡು ಮೌಲ್ಯವರ್ಧನೆ ಮಾಡಿ ಉತ್ತಮ ಆದಾಯ ನಿರೀಕ್ಷಿಸುತ್ತಿರುವ ಭೀಮರಾವ ರವರು ಇತರ ರೈತರಿಗೂ ಮಾದರಿ”, ಎನ್ನುತ್ತಾರೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಲಿಂಗನಗೌಡ ಪೋಲಿಸಪಾಟೀಲ.

“ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತೋಟಗಾರಿಕೆ ಇಲಾಖೆ ಕಾರ್ಯ ಶ್ಲಾಘನೀಯ ರೈತರು ಬೆಳೆದ ತರಕಾರಿ ಹಣ್ಣುಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸುವಲ್ಲಿ ತೋಟಗಾರಿಕೆ ಇಲಾಖೆ ಅತ್ಯಂತ ಮಹತ್ವದ ಪಾತ್ರ ವಹಿಸಿ ರೈತರನ್ನು ಸಂಕಷ್ಟದಿಂದ ಕಾಪಾಡುವಲ್ಲಿ ಮುಂದಾಗಿದೆ” ಎನ್ನುತ್ತಾರೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದ ಮುಖ್ಯಸ್ಥ ಡಾ. ಎಂ.ಬಿ. ಪಾಟೀಲ.

“ಲಾಕ್ ಡೌನ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರಿಗೆ ಆತ್ಮಸ್ಥೈರ್ಯ ತುಂಬಿ ಅವರು ಆತಂಕಕ್ಕೆ ಒಳಗಾಗದೇ ತಮ್ಮ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ಉತ್ತಮ ಆದಾಯ ಗಳಿಸಲು ಸಹಾಯ ಹಸ್ತ ನೀಡುವುದೇ ತೋಟಗಾರಿಕೆ ಇಲಾಖೆ ಉದ್ದೇಶ. ಈ ನಿಟ್ಟಿನಲ್ಲಿ ರೈತರು ಎದೆಗುಂದದೆ ಇಲಾಖೆಯನ್ನು ಸಂಪರ್ಕಿಸಿ ಮಾರುಕಟ್ಟೆ ಮತ್ತು ಸಂಸ್ಕರಣೆ ಮಾಡುವುದರ ಮೂಲಕ ತಮ್ಮ ಉತ್ಪನ್ನಗಳನ್ನು ರೈತರು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಿಳಿದುಕೊಳ್ಳಬೇಕು. ಜಗತ್ತೀಗೆ ಬಂದಿರುವ ಇಂತಹ ವಿಷಮಸ್ಥಿತಿಯಲ್ಲಿ ರೈತರು ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಈಗಿನ ಈ ಲಾಕ್ಡೌನ್ ಸ್ಥಿತಿ ಕೇವಲ ತಾತ್ಕಾಲಿಕ” ಎನ್ನುತ್ತಾರೆ ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ.

Related