ಹುಬ್ಬಳ್ಳಿ,ಮಾ. 06: ದಿವಾಳಿ ಹಂತಕ್ಕೆ ತಲುಪಿರುವ ಖಾಸಗಿ ಸ್ವಾಮ್ಯದ ಯೆಸ್ ಬ್ಯಾಂಕ್ ನ ಎಲ್ಲ ಆರ್ಥಿಕ ವ್ಯವಹಾರಗಳನ್ನು ಆರ್ ಬಿ ಐ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ. ತೀವ್ರ ಸಂಕಷ್ಟಕ್ಕೊಳಗಾಗಿರೋ ಯೆಸ್ ಬ್ಯಾಂಕ್ ಇದೀಗ ಸೂಪರ್ ಸೀಡ್ ಆಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ಆಡಳಿತಾಧಿಕಾರಿಯನ್ನು ನಿಯೋಜಿಸಿದ್ದು ಹುಬ್ಬಳ್ಳಿ ಸೇರಿದಂತೆ ದೇಶಾದ್ಯಂತ ಗ್ರಾಹಕರು ಪರದಾಡುತಿದ್ದಾರೆ.
ಸಾಲದ ಸುಳಿಯಲ್ಲಿ ಸಿಕ್ಕು ತೊಂದರೆಗೊಳಗಾದ ಬಗ್ಗೆ ಯೆಸ್ ಬ್ಯಾಂಕ್ ಕಳೆದ ತಿಂಗಳು ಮಾಹಿತಿ ಹೊರ ಹಾಕಿತ್ತು. ಇದರಿಂದ ಹೊರಗೆ ಬರಲು ತನಗೆ 14 ಸಾವಿರ ಕೋಟಿಯಷ್ಟು ಅಗತ್ಯವಿದೆ ಎಂದು ಪ್ರಕಟಿಸಿತ್ತು. ಆಗ ಷೇರುದಾರರಲ್ಲಿ ತಲ್ಲನ ಉಂಟಾಗಿತ್ತು. ಈ ವೇಳೆ ಇದೆಲ್ಲವನ್ನು ಸ್ಕ್ಷ್ಮವಾಗಿ ಗಮನಿಸುತ್ತಿದ್ದ ಆರ್ ಬಿ ಐ ನಿನ್ನೆ ಸೂಪರ್ ಸೀಡ್ ಮಾಡುವ ಮೂಲಕ ಯೆಸ್ ಬ್ಯಾಂಕ್ ವ್ಯವಹಾರಕ್ಕೆ ಬ್ರೇಕ್ ಹಾಕಿದೆ.
ನೆರವಿನ ಭರವಸೆ
ಖಾಸಗಿ ಸಹಭಾಗಿತ್ವದಲ್ಲಿರೋ ಯೆಸ್ ಬ್ಯಾಂಕ್ ಸಂಕಷ್ಟದ ಪರಿಸ್ಥತಿಯನ್ನು ಅವಲೋಕಿಸಿದ ಭಾರತೀ ಜೀವ ವಿಮೆ ಸಂಸ್ಥೆ ತನ್ನ ಕೈಲಾದ ಮಟ್ಟಿಗೆ ಆರ್ಥಿಕ ನೆರವು ನೀಡುವ ಭರವಸೆ ನೀಡಿದೆ. ಜೊತೆಗೆ ಎಸ್ ಬಿ ಐ ಕೂಡ ಇದೇ ಮಾತು ಹೇಳಿದ್ದು, ಯೆಸ್ ಬ್ಯಾಂಕ್ ನ ಗ್ರಾಹಕರಿಗೆ ಕೊಂಚ ಸಮಾಧಾನ ಮೂಡಿದೆ. ಎಲ್ ಐ ಸಿ, ಯೆಸ್ ಬ್ಯಾಂಕ್ ನಲ್ಲಿ ಶೇ.8 ಷೇರು ಪಾಲು ಹೊಂದಿದೆ. ಖಾಸಗಿ ವಲಯದ ಬ್ಯಾಂಕ್ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರೋ ಎಸ್ ಬಿ ಐ ಮತ್ತು ಎಲ್ ಐ ಸಿ ಗಳು ನೆರವಿಗೆ ಧಾವಿಸಿರೋದು ಇದೇ ಮೊದಲು ಎನ್ನಲಾಗುತ್ತಿದೆ. ಇದೆಲ್ಲದ ಮಧ್ಯೆ ಇಂದು ಷೇರು ಸೂಚ್ಯಂಕ ಮತ್ತೆ 1000 ಕ್ಕಿಂತಲೂ ಅಧಿಕ ಇಳಿಕೆಯನ್ನು ತೋರಿಸಿದ್ದು ಗ್ರಾಹಕರಲ್ಲಿ ಮತ್ತಷ್ಟು ಆತಂಕ ತರಿಸಿದೆ.
50 ಸಾವಿರದ ವರೆಗೆ ಡ್ರಾ
ಸೂಪರ್ ಸೀಡ್ ಆಗಿದ್ದರ ಪರಿಣಾಮ ಯೆಸ್ ಬ್ಯಾಂಕ್ ನ ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಕೆಲವರಂತೂ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಆದರೆ, ಯಾರೂ ಅಷ್ಟೊಂದು ಗಾಬರಿಯಾಗೋ ಅಗತ್ಯವಿಲ್ಲ. ಬ್ಯಾಂಕ್ ನೊಂದಿಗೆ ವ್ಯವಹಾರ ಹೊಂದಿದವರು ಇದೀಗ 50 ಸಾವಿರದವರೆಗೆ ಹಣ ಡ್ರಾ ಮಾಡಬಹುದಾಗಿದೆ. ಆದರೆ, ಲಕ್ಷ, ಕೋಟಿ ವ್ಯವಹಾರಕ್ಕೆ ಬ್ರೇಕ್ ಹಾಕಲಾಗಿದೆ. ಯಾಕೆಂದರೆ, ಯೆಸ್ ಬ್ಯಾಂಕ್ ಯಡವಿದ್ದು ಎಲ್ಲಿ? ಎಂಬ ತನಿಖೆ ನಡೆಸಲಾಗುತ್ತೆ ಎಂದು ಆರ್ ಬಿ ಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬ್ಯಾಂಕ್, ಎಟಿಎಂಗಳಲ್ಲಿ ಸರದಿ: ಹಣ ಸಿಗದೆ ಜನ ಪರದಾಟ
ಇನ್ನು ಬ್ಯಾಂಕ್ ಸೂಪರ್ ಸೀಡ್ ವಿಷಯ ತಿಳಿಯುತ್ತಿದ್ದಂತೆ ಬ್ಯಾಂಕ್ ಗ್ರಾಹಕರು ಎಟಿಎಂಗಳಲ್ಲಿ ಹಣ ಬಿಡಿಸಿಕೊಳ್ಳಲು ಸರದಿ ಸಾಲಿನಲ್ಲಿ ನಿಂತರು. ಆದರೆ, ಎಟಿಎಂಗಳಲ್ಲಿ ಹಣ ಇಲ್ಲದೇ ಪರದಾಡಿದರು. ಒಬ್ಬ ವ್ಯಕ್ತಿ ತಾನು ಮದುವೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಹಣವೆಲ್ಲ ಬ್ಯಾಂಕ್ ನಲ್ಲಿದೆ. ನಾನು ಏನು ಮಾಡುವುದು? ಎಂದು ಆತಂಕಿತರಾಗಿ ಬ್ಯಾಂಕ್ ಮುಂದೆ ನೆರೆದಿದ್ದವರನ್ನೇ ಪ್ರಶ್ನಿಸಿದರು. ಜೊತೆಗೆ, ಮಹಿಳೆಯರಂತು ತಮ್ಮ ಹಣ ಬಾರದು ಎಂದು ಅಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು.
ಇನ್ನು ಇಂದು ಬ್ಯಾಂಕ್ ಗೆ ತೆರಳಿ ಹಣ ಹಿಂತೆಗೆದುಕೊಳ್ಳಲು ನೂಕು ನುಗ್ಗಲು ಉಂಟಾಗಿತ್ತು. ಆದರೆ, ನೆರೆದ ಎಲ್ಲ ಗ್ರಾಹಕರಿಗೂ ಹಣ ಕೊಡಲು ಸಾಧ್ಯವಾಗಲಿಲ್ಲ. ಹಣ ಸಿಗದೆ ಜನ ಪರದಾಡುವ ದೃಶ್ಯಗಳು ಸಾಮಾನ್ಯ ಸಂಗತಿಯಾಗಿವೆ.