ಬೆಳಗಾವಿ: ಅಳಿವಂಚಿನಲ್ಲಿರುವ ಕ್ರೀಡೆಗಳನ್ನು ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಕೊಂಡೋಯ್ಯಲು ನಮ್ಮ ಸರ್ಕಾರ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮುಖ್ಯವಾಹಿನಿಗೆ ತರುತ್ತಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ತಿಳಿಸಿದರು.
ಶುಕ್ರವಾರ ಬೆಳಗಾವಿ ಸುವರ್ಣ ವಿಧಾನಸೌಧದ ನೆಲಮಹಡಿ ಸಭಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಖಿಲ ಭಾರತ ಅಂತರ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದ ಮಂಗಳೂರು ವಿಶ್ವವಿದ್ಯಾಲಯ ಕಬ್ಬಡ್ಡಿ ತಂಡಕ್ಕೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವ ಬಿ. ನಾಗೇಂದ್ರರವರು, ಮಂಗಳೂರು ವಿಶ್ವವಿದ್ಯಾಲಯದ ಕ್ರೀಡಾಪಟುಗಳು 33 ವರ್ಷದ ಬಳಿಕ ಮತ್ತೆ ಎರಡನೇ ಭಾರಿಗೆ ವಿಜೇತರಾಗಿ ಚಿನ್ನಡಪದಕ ಪಡೆದಿದ್ದು ಈ ಕ್ರೀಡಾಕೂಟವು 1952 ರಲ್ಲಿ ಪ್ರಾರಂಭ ಗೊಂಡು 71 ವರ್ಷದ ಇತಿಹಾಸದಲ್ಲಿ ಎರಡು ಭಾರಿ ಚಿನ್ನದ ಪದಕ ಪಡೆದಿದ್ದಾರೆ. ನಮ್ಮ ಸರ್ಕಾರದ ವತಿಯಿಂದ ಸ್ಥಳೀಯ ಕ್ರೀಡೆಗಳನ್ನು ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಕೊಂಡೋಯ್ಯಲು ಒಂದು ಜಿಲ್ಲೆ ಒಂದು ಕ್ರೀಡೆ ಎನ್ನುವ ಶೀರ್ಷಿಕೆಯಡಿ 31 ಜಿಲ್ಲೆಗಳಲ್ಲಿ ಕ್ರೀಡಾಪತುಗಳನ್ನು ಮತ್ತು ಕ್ರೀಡಾಭಿಮಾನಿ ಗಳನ್ನು ಹೆಚ್ಚಿಸಲು ನಮ್ಮ ಸರ್ಕಾರ ಹಲವು ಯೋಜನೆ ನೀಡಿದೆ ವಿಶೇಷವಾಗಿ ಒಲಂಪಿಕ್ & ಪ್ಯಾರಾ ಒಲಂಪಿಕ್ ನಲ್ಲಿ ಚಿನ್ನ, ಬೆಳ್ಳಿ ಗೆದ್ದ ಕ್ರೀಡಾಪಟುಗಳಿಗೆ ಉದ್ಯೋಗ ನೀಡುವ ಯೋಜನೆಯನ್ನು ಅತೀ ಶೀಘ್ರದಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದರು.
ಇನ್ನು ಸಭಾಧ್ಯಕ್ಷರಾದ ಯು. ಟಿ ಖಾದರ್ ರವರು ಮಾತನಾಡಿ ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಕ್ರೀಡಾಪಟು ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ವಿಜೇತ ರಾಗಿದ್ದಾರೆ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉತ್ತೇಜನ ನೀಡುತ್ತಾ ಇನ್ನು ಯುವಕರ ಬಗ್ಗೆ ಅಪಾರ ಕಾಳಜಿ ವಹಿಸಿರುವ ಕ್ರೀಡಾ ಸಚಿವ ಬಿ. ನಾಗೇಂದ್ರರವರು ಬಹಳ ಉತ್ಸುಕರಾಗಿದ್ದಾರೆ.
ಒಬ್ಬ ಕ್ರೀಡಾಪಟು ಸಾಧನೆ ಮಾಡಬೇಕಾದರೆ ತಂದೆ – ತಾಯಿಗಳ ಪ್ರೋತ್ಸಾಹ ಬಹಳ ಮುಖ್ಯವಾಗಿದೆ, ನಮ್ಮ ಮಂಗಳೂರು ಜಿಲ್ಲೆಯಲ್ಲಿ ಇತ್ತೀಚೆಗೆ ಒಳ್ಳೆಯ ಕ್ರೀಡಾ ಪ್ರತಿಭೆಗಳು ಹೊರಹೊಮ್ಮುತ್ತಿದ್ದು ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕುಗಳಲ್ಲಿ ಕ್ರೀಡಾಪಟು & ಕ್ರೀಡಾಭಿಮಾನಿಗಳನ್ನು ಹೆಚ್ಚಿಸಲು ಉತ್ತಮ ಅನುದಾನ & ಕ್ರೀಡಾಂಗಣ & ಗರಡಿ ಮನೆ ನೀಡಿ ಗೌರವಿಸಬೇಕು ಎಂದು ತಿಳಿಸಿದರು.
ವಿಜೇತರಾದ ತಂಡದ ಎಲ್ಲಾ ಕ್ರೀಡಾಪಟುಗಳಿಗೆ ಹಾಗೂ ತರಬೇತುದಾರರಿಗೆ ಸನ್ಮಾನಿಸಿ ಒಂದು ಲಕ್ಷ ರೂಪಾಯಿ ಗೌರವಧನ ವಿತರಿಸಲಾಯಿತು.
ಈ ಸಂದರ್ಭದಲ್ಲಿವಿಧಾನಸಭಾ ಸಭಾಧ್ಯಕ್ಷರಾದ ಯು. ಟಿ. ಖಾದರ್, ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ ಬಿ. ನಾಗೇಂದ್ರ,ಅರೋಗ್ಯ ಸಚಿವ ದಿನೇಶ್ ಗುಂಡೂರಾವ್, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಎಂ.ಎಲ್.ಸಿ. ಗೋವಿಂದರಾಜ್, ಉಪಸ್ಥಿತರಿದ್ದರು.