ಹಂಪಿ, ತುಂಗಭದ್ರಾ ಡ್ಯಾಮ್ ವೀಕ್ಷಿಸಿದ ಉಪರಾಷ್ಟ್ರಪತಿ

ಹಂಪಿ, ತುಂಗಭದ್ರಾ ಡ್ಯಾಮ್ ವೀಕ್ಷಿಸಿದ ಉಪರಾಷ್ಟ್ರಪತಿ

ಬಳ್ಳಾರಿ : ತುಂಗಾಭದ್ರಾ ಜಲಾಶಯ, ಹಂಪಿಯ ವಿಶ್ವ ಪಾರಂಪರಿಕ ತಾಣಗಳನ್ನು ವೀಕ್ಷಿಸಲು ಉಪರಾಷ್ಟ್ರಪತಿ ಎಂ.ವೆAಕಯ್ಯನಾಯ್ಡು ಹಾಗೂ ಅವರ ಧರ್ಮಪತ್ನಿ ಎಂ.ಉಷಾ ಅವರು ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆಯ ಮುನ್ಸಿಪಲ್ ಮೈದಾನಕ್ಕೆ ವಾಯುಪಡೆಯ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಶುಕ್ರವಾರ ಸಂಜೆ ಬಂದಿಳಿದರು.

ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರನ್ನು ಪರಿಸರ, ಜೀವಿಶಾಸ್ತ್ರ, ಪ್ರವಾಸೋದ್ಯಮ ಹಾಗೂ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಅವರು ಸ್ವಾಗತಿಸಿದರು.

ನಂತರ ಉಪರಾಷ್ಟ್ರಪತಿಗಳಾದ ಎಂ.ವೆಂಕಯ್ಯನಾಯ್ಡು ಹಾಗೂ ಅವರ ಧರ್ಮಪತ್ನಿ ಎಂ.ಉಷಾ ಅವರು ತುಂಗಾಭದ್ರಾ ಜಲಾಶಯದ ಸೌಂದರ್ಯ ಮತ್ತು ಜಲಧಾರೆ ಕಣ್ತುಂಬಿಕೊಳ್ಳಲು ತೆರಳಿದರು.

ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪದ ತುಂಗಾಭದ್ರಾ ಜಲಾಶಯವನ್ನು ಶುಕ್ರವಾರ ಸಂಜೆ ವೀಕ್ಷಿಸಿ ಮಾತನಾಡಿದ ಅವರು, ಹಂಪಿ ವರ್ಣನೆಗೆ ಮೀರಿದ ಪ್ರವಾಸಿ ತಾಣ. ಸುತ್ತಲೂ ಗುಡ್ಡ ಮತ್ತು ಹಚ್ಚ ಹಸಿರಿನ ತೋಟಗಳು, ಇಷ್ಟು ವಿಸ್ತಾರವಾದ ಬಯಲು ಪ್ರದೇಶದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಹಂಪಿಯನ್ನು ಭೇಟಿಮಾಡಿರುವುದು ನನ್ನ ಅದೃಷ್ಟ ಎಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ನದಿ ನೀರಿನ ಮೂಲಗಳಿರುವ ಕಡೆ ಎಲ್ಲೆಲ್ಲಿ ಯಾವುದೇ ರೀತಿಯ ಸಮಸ್ಯೆಗಳು, ವ್ಯಾಜ್ಯಗಳು ಇಲ್ಲವೋ ಮತ್ತು ನಿರ್ಮಾಣಕ್ಕೆ ಸಾಧ್ಯವಿದೆಯೋ ಅಂತಹ ಕಡೆಗಳಲ್ಲೆಲ್ಲಾ ಸಣ್ಣ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ನೀರು ಸಂಗ್ರಹಿಸುವ ಮತ್ತು ಕೃಷಿ ಹಾಗೂ ಇನ್ನಿತರ ಕಾರ್ಯಗಳಿಗೆ ಬಳಸುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.

ನದಿಗಳ ಜೋಡಣಾ ಯೋಜನೆಯ ಅಗತ್ಯತೆ ಬಗ್ಗೆ ಒತ್ತಿ ಹೇಳಿದ ಅವರು, ನದಿಗಳ ಜೋಡಣಾ ಯೋಜನೆ ಜಾರಿಯಾದರೆ ಎಲ್ಲ ರಾಜ್ಯಗಳು ಅಭಿವೃದ್ಧಿಯಾಗಲಿವೆ. ಇದಕ್ಕೆ ಎಲ್ಲ ರಾಜ್ಯಗಳು ಕೈಜೋಡಿಸಬೇಕಿದೆ ಎಂದರು.

ಈ ಯೋಜನೆ ಜಾರಿಯಾದರೆ ಗೋದಾವರಿ, ಮಹಾನದಿ, ಕೃಷ್ಣಾ, ಕಾವೇರಿ, ತುಂಗಾಭದ್ರಾ ಸೇರಿದಂತೆ ಇನ್ನೀತರ ನದಿಗಳ ನೀರು ವ್ಯರ್ಥವಾಗಿ ಸಮುದ್ರ ಸೇರುವುದಕ್ಕೆ ತಡೆ ಬೀಳಲಿದ್ದು, ಈ ಯೋಜನೆ ಅತ್ಯಂತ ಉಪಯುಕ್ತವಾಗಿದೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಅವಶ್ಯಕ ಎಂದರು.

ರಾಯಲಸೀಮಾ, ತೆಲಂಗಾಣದ ಪ್ರದೇಶಗಳ ಜೀವನಾಡಿಯಾಗಿರುವ ತುಂಗಾಭದ್ರಾ ಜಲಾಶಯ ತುಂಬಿರುವುದನ್ನು ನೋಡಿ ಸಂತಸವಾಗಿದೆ. ಈ ಭಾಗಗಳ ಜನರು ಮತ್ತು ರೈತರ ಅಕ್ಷಯ ಪಾತ್ರೆಯಾಗಿರುವ ಈ ಜಲಾಶಯ ಕಳೆದ ನಾಲ್ಕು ವರ್ಷಗಳಿಂದ ತುಂಬಿದAತೆ ಮುಂದಿನ ದಿನಗಳಲ್ಲಿಯೂ ತುಂಬಲಿ. ನಮಗೆಲ್ಲ ಅನ್ನ ನೀಡುವ ಈ ಭಾಗದ ರೈತರು ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.

ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ತಲೆದೋರಲಿದೆ ಎಂಬ ಆತಂಕವನ್ನು ತಮ್ಮ ಮಾತುಗಳಲ್ಲಿ ವ್ತಕ್ತಪಡಿಸಿದ ಅವರು, ನೀರಿನ ಮಿತಬಳಕೆ, ಮರುಬಳಕೆ ನಮ್ಮ ಮಂತ್ರವಾಗಬೇಕು. ನೀರಿನ ಸಂರಕ್ಷಣೆ, ನೀರಿನ ಸಂಗ್ರಹಣೆ, ವೈಯಕ್ತಿಕವಾಗಿ ಮಳೆ ನೀರು ಕೊಯ್ಲು ಕಾರ್ಯಗಳಿಗೆ ಜನರು ಕೈ ಜೋಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ, ಕಲಬುರಗಿ ವಿಭಾಗೀಯ ಪ್ರಾದೇಶಿಕ ಆಯುಕ್ತ ಎನ್.ವಿ.ಪ್ರಸಾದ್, ಐಜಿಪಿ ಮನಿಷ್ ಖರ್ಬಿಕರ್, ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ, ಅವರ ಪತ್ನಿ ಎಂ.ಉಷಾ ಮತ್ತು ಕುಟುಂಬಸ್ಥರು ಮತ್ತಿತರರು ಇದ್ದರು.

Related