ತುಮಕೂರು, ಮಾ. 01 : ಚಿರತೆ ದಾಳಿಗೆ ಮೂರು ವರ್ಷದ ಹೆಣ್ಣು ಮಗು ಬಲಿಯಾಗಿರುವ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ತಾಲೂಕಿನ ಹೆಬ್ಬೂರು ಹೋಬಳಿ ಕಣಕುಪ್ಪೆ ಗ್ರಾ. ಪಂ ವ್ಯಾಪ್ತಿಯ ಬೈಚೇನಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ಬೈಚೇನಹಳ್ಳಿ ಗ್ರಾಪಂ ಸದಸ್ಯ ಗಂಗಚಿಕ್ಕಣ್ಣ ಅವರ ಮೊಮ್ಮಗಳು ಚಂದನ ಮನೆಯ ಮುಂದೆ ಆಟವಾಡುತ್ತಿದ್ದಳು. ಈ ಸಮಯದಲ್ಲಿ ರಾತ್ರಿ 8 ಗಂಟೆ ವೇಳೆಗೆ ಚಿರತೆ ದಾಳಿ ನಡೆಸಿದ್ದು, ಮಗುವನ್ನು ಹೊತ್ತೊಯ್ದಿದೆ. ಮಗುವಿನ ತಂದೆ ತಾಯಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಮಗು ಅಜ್ಜನೊಂದಿಗೆ ಬೈಚೇನಹಳ್ಳಿಯಲ್ಲಿತ್ತು.
ಮಗುವಿನ ತಂದೆ ಶ್ರೀನಿವಾಸ್ ಮತ್ತು ತಾಯಿ ಶಿಲ್ಪ ದಂಪತಿ ಶನಿವಾರವಷ್ಟೇ ಮಗುವನ್ನು ನೋಡಲು ಬೆಂಗಳೂರಿನಿಂದ ಬಂದಿದ್ದರು. ಘಟನೆ ಬಳಿಕ ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, 10 ಗಂಟೆ ವೇಳೆಗೆ ಮಗುವಿನ ಶವ ಪತ್ತೆಯಾಗಿದೆ.