ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ

ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ

ಬೆಳಗಾವಿ: ಪ್ರೀತಿಯ ವಿಷಯವನ್ನು ಮುಂದಿಟ್ಟುಕೊಂಡು ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯೊಬ್ಬಳನ್ನು ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು, ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಇಂದು (ಡಿ. 11 ಸೋಮವಾರ) ಮುಂಜಾನೆ ಪ್ರೀತಿಸಿದ ಯುವತಿಯನ್ನು ಕರೆದುಕೊಂಡು ಯುವಕ ಓಡಿ ಹೋಗಿದ್ದರಿಂದ ಆಕ್ರೋಶಗೊಂಡ ಯುವತಿಯ ಸಂಬಂಧಿಕರು ಯುವಕನ ಮನೆಯನ್ನು ಧ್ವಂಸಗೊಳಿಸಿ, ಆತನ ತಾಯಿಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಅಮಾನವೀಯ ನಡೆದಿರುವುದು ವರದಿಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಬಂಧಿಸಲಾಗಿದೆ ಮತ್ತು ಹಲ್ಲೆ ನಡೆಸಿ ನಾಪತ್ತೆಯಾಗಿರುವ ಇನ್ನಿಬ್ಬರಿಗಾಗಿ ಶೋಧ ಜಾರಿಯಲ್ಲಿದೆ ಎಂದು ಬೆಳಗಾವಿ ಪೊಲೀಸ್ ಕಮೀಶನರ್ ಎಸ್ ಎನ್  ಸಿದ್ದರಾಮಪ್ಪ ಹೇಳಿದರು.

ಘಟನೆ ವಿವರ: ವಂಟಮೂರಿ ಗ್ರಾಮದ ದುಂಡಪ್ಪ ಮತ್ತು ಪ್ರಿಯಾಂಕಾ ಎಂಬವರು ಪ್ರೇಮಿಗಳಾಗಿದ್ದರು. ಈ ನಡುವೆ ಪ್ರಿಯಾಂಕಾರಿಗೆ ಬೇರೊಬ್ಬನ ಜೊತೆ ವಿವಾಹ ನಿಶ್ಚಯವಾಗಿತ್ತು. ಈ ವಿಚಾರ ತಿಳಿದ ದುಂಡಪ್ಪ ರವಿವಾರ ರಾತ್ರಿ 12:30ರ ಸುಮಾರಿಗೆ ಪ್ರಿಯಾಂಕಾಳನ್ನು ಕರೆದುಕೊಂಡು ಓಡಿ ಹೋಗಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿಯ ಕುಟುಂಬಸ್ಥರು ಸೋಮವಾರ ಮುಂಜಾವ 3:30ರ ಸುಮಾರಿಗೆ ವೇಳೆ ದುಂಡಪ್ಪರ ಮನೆಗೆ ನುಗ್ಗಿ ಮಲಗಿದ್ದ ಅವರ ತಾಯಿ ಕಮಲವ್ವರಿಗೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅವರನ್ನು ಮನೆಯಿಂದ ಹೊರಗೆಳೆದು ಬೆತ್ತಲೆಗೊಳಿಸಿ ಕಂಬವೊಂದಕ್ಕೆ ಕಟ್ಟಿ ಹಲ್ಲೆಗೈದು ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ದೂರಲಾಗಿದೆ. ದುಷ್ಕರ್ಮಿಗಳು ಕಮಲ್ವರ ಮನೆಯನ್ನೂ ಧ್ವಂಸಗೊಳಿಸಿದ್ದಾರೆ.

Related