ಲಕ್ನೋ, ಜು 22 : ವಾರದ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದ ಉತ್ತರ ಪ್ರದೇಶದ ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇ ರಸ್ತೆ ಮಳೆಯಿಂದಾಗಿ ಗುಂಡಿ ಬಿದ್ದಿದೆ.
ಸುಮಾರು 296 ಕಿ.ಮೀ. ಉದ್ದದ ರಸ್ತೆ ಇದಾಗಿದೆ. ರಸ್ತೆ ಅಭಿವೃದ್ಧಿಪಡಿಸಿ ಉದ್ಘಾಟನೆಗೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲಾಗಿತ್ತು. ಕಳೆದ ವಾರವಷ್ಟೇ ಮೋದಿ ಅವರು ರಸ್ತೆ ಉದ್ಘಾಟಿಸಿದ್ದರು. ಆದರೆ ಮಳೆಯಿಂದಾಗಿ ರಸ್ತೆ ಗುಂಡಿ ಬಿದ್ದಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರೀ ಟೀಕೆ ವ್ಯಕ್ತವಾಗಿದೆ.
ಮಳೆಗೆ ರಸ್ತೆ ಒಂದೂವರೆ ಅಡಿ ಆಳದಷ್ಟು ಗುಂಡಿ ಬಿದ್ದಿದೆ. ಇದರ ವೀಡಿಯೋವನ್ನು ಟ್ವೀಟ್ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದು ಬಿಜೆಪಿಯ ಅರೆಮನಸ್ಸಿನ ಅಭಿವೃದ್ಧಿಯ ಗುಣಮಟ್ಟದ ಮಾದರಿಯಾಗಿದೆ. ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇಯನ್ನು ‘ದೊಡ್ಡವರು’ ಉದ್ಘಾಟಿಸಿದರು. ಇದಾದ ಒಂದು ವಾರದಲ್ಲೇ ಭ್ರಷ್ಟಾಚಾರದ ದೊಡ್ಡ ಗುಂಡಿಗಳು ಕಾಣಿಸಿಕೊಂಡಿವೆ. ಅದರ ಮೇಲೆ ರನ್ ವೇ ನಿರ್ಮಿಸದಿರುವುದು ಒಳ್ಳೆಯದಾಯಿತು’ ಎಂದು ಅಖಿಲೇಶ್ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ.