ಬೆಂಗಳೂರು : ಬಿಬಿಎಂಪಿ ಚುನಾವಣೆ ನಡೆಸುವಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಅಂತಿಮ ತೀರ್ಪನ್ನು ನಾಳೆಗೆ ಹೈಕೋರ್ಟ್ ಕಾಯ್ದಿರಿಸಿರುವ ಹಿನ್ನೆಲೆ ನಾಳೆಯ ತೀರ್ಪಿನತ್ತ ಎಲ್ಲರ ಕುತೂಹಲ ಕೆರಳಿದೆ.
ಪ್ರಸ್ತುತ ಇರುವ 198 ವಾರ್ಡ್ ಗಳಿಗೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಸಿದ್ಧಪಡಿಸಿಕೊಂಡಿದೆ. ಸರ್ಕಾರ ಕೂಡ ವಾರ್ಡ್ ಪುರ್ವಿಂಗಡಣೆ ಮಾಡಿ ಮೀಸಲಾತಿ ಪಟ್ಟಿಯನ್ನು ಘೋಷಿಸಿದೆ.
ಹೀಗಾಗಿ ಚುನಾವಣೆ ನಡೆಸಲು ಅವಕಾಶ ನೀಡಬೇಕೆಂದು ಚುನಾವಣಾ ಆಯೋಗ ನ್ಯಾಯಾಲಯದ ಮುಂದೆ ಪ್ರಬಲವಾದ ಮಂಡಿಸಿದೆ. ಅಲ್ಲದೆ, ಸಕಾಲದಲ್ಲಿ ಚುನಾವಣೆ ನಡೆಸಲು ಸಿದ್ಧವಿರುವುದಾಗಿ ಆಯೋಗ ಸ್ಪಷ್ಟಪಡಿಸಿದೆ.
ಈ ನಡುವೆ ಒಂದು ವೇಳೆ ಚುನಾವಣೆ ನಡೆಸುವಂತೆ ತೀರ್ಪು ನೀಡಿದರೆ ಆಯೋಗ ಸಿದ್ಧವಾಗಿರುವಂತೆ 198 ವರ್ಡ್ಗಳಿಗೆ ಚುನಾವಣೆ ನಡೆಯಲಿದೆಯೇ ಅಥವಾ ಸರ್ಕಾರ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲಿದೆಯೇ? ಪಿಐಎಲ್ ಸಲ್ಲಿಸಿರುವ ಕಾಂಗ್ರೆಸ್ ಸದಸ್ಯರಾದ ಶಿವರಾಜ್ ಹಾಗೂ ಅಬ್ದುಲ್ ವಾಜೀದ್ ಅವರ ಮುಂದಿನ ನಡೆ ಏನು ಎಂಬುದು ನಾಳಿನ ತೀರ್ಪಿನ ನಂತರ ಗೊತ್ತಾಗಲಿದೆ.